ಚಿಟಗುಪ್ಪ: ತಾಲ್ಲೂಕಿನ ಕರಕನಳ್ಳಿ ಗ್ರಾಮದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ಕಾಮಗಾರಿ ಮುಗಿದು ತಿಂಗಳು ಕಳೆಯುವ ಮುನ್ನವೇ ರಸ್ತೆ ಕಿತ್ತು ಹೋಗಿದೆ!.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿ ₹40 ಲಕ್ಷ ಅನುದಾನದಲ್ಲಿ ಈ ಕಾಮಗಾರಿ ನಡೆದಿದೆ.
‘ಗುತ್ತಿಗೆದಾರರು ನೆಪಕ್ಕೆ ಎನ್ನುವಂತೆ ರಸ್ತೆಗೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿದ್ದಾರೆ. ರಸ್ತೆ ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣ ವಾಹನ ಓಡಾಡಿದರೂ ಗುಂಡಿಗಳು ಬೀಳುತ್ತಿವೆ’ ಎಂದು ಗ್ರಾಮದ ಮಲ್ಲಯ್ಯ ಮುತ್ಯಾ ಆಕ್ರೋಶ ವ್ಯಕ್ತಪಡಿಸಿದರು.
‘ಕಾಮಗಾರಿ ಕುರಿತು ಗುತ್ತಿಗೆದಾರರನ್ನು ವಿಚಾರಿಸಿದಾಗ ಎಲ್ಲಿಗೆ ಬೇಕಾದರೂ ಹೋಗಿ ಎಲ್ಲವೂ ಚೆನ್ನಾಗಿಯೇ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.
ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿಯೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಇದೇ ಗುತ್ತಿಗೆದಾರರು ತಳಪಾಯ ಹಾಕದೇ ಸಭಾಂಗಣ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಕ್ಕೆ ಅಲ್ಲಿಯೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.