ಬೀದರ್: ಔರಾದ್ ಶಾಸಕ ಪ್ರಭು ಚವಾಣ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರಿಂದ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲೆಯ ವಿವಿಧೆಡೆ ವಿಜಯೋತ್ಸವ ಆಚರಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಬಿಜೆಪಿ ಯುವ ಮುಖಂಡ ಗುರುನಾಥ ರಾಜಗೀರಾ ಮಾತನಾಡಿ, ‘ಪ್ರಭು ಚವಾಣ್ ಗೋಹತ್ಯೆ ನಿಷೇಧ ಕಾಯ್ದೆಯಂತಹ ಐತಿಹಾಸಿಕ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ಹೇಳಿದರು.
ಯುವ ಮುಖಂಡ ವೀರೇಶ ಸ್ವಾಮಿ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಧೈರ್ಯ ತುಂಬಿದ್ದಾರೆ. ಸಂಕಷ್ಟದಲ್ಲಿದ್ದರಿಗೆ ಅಗತ್ಯ ನೆರವು ನೀಡಿದ್ದಾರೆ. ಜನಸೇವಕರಾಗಿರುವ ಪ್ರಭು ಚವಾಣ್ ಅವರ ಸೇವೆಯನ್ನು ಪಕ್ಷ ಗುರುತಿಸಿದೆ’ ಎಂದರು.
ಮುಖಂಡರಾದ ಜನಾರ್ಧನ್ ರೆಡ್ಡಿ, ಅಂಬರೀಷ ಬಟ್ನಾಪೂರ, ಬಸವರಾಜ ಪಾಟೀಲ, ವಿಶಾಲ ಅತಿವಾಳೆ, ಚೇತನ ಸೋರಳ್ಳಿ, ಪುಷ್ಪಕ ಜಾಧವ್, ಕೈಲಾಶ ಬೆಳ್ಳೂರ್, ಶರಣಬಸಪ್ಪ ಸಾವಳೆ, ಪವನ ಮಡಿವಾಳ, ಸಿದ್ದು ಸ್ವಾಮಿ ಇದ್ದರು.
ನಗರ ಘಟಕದಿಂದ ವಿಜಯೋತ್ಸವ: ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪ್ರಭು ಚವಾಣ್ ಪರ ಘೋಷಣೆ ಮೊಳಗಿಸಿ ಸಂಭ್ರಮಿಸಿದರು.