ಬೀದರ್: ಐಟಿಐ ಕುಶಲಕರ್ಮಿಗಳು ಪ್ರಾಯೋಗಿಕ ಪ್ರಾವೀಣ್ಯತೆ ಕರಗತ ಮಾಡಿಕೊಳ್ಳಬೇಕು ಎಂದು ಇಂಡೋ-ಜರ್ಮನ್ ವೃತ್ತಿ ಶಿಕ್ಷಣ ಮುಖ್ಯಸ್ಥ ಡಾ. ರೊಡ್ನಿ ರೆವಿಯರ್ ಸಲಹೆ ಮಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕೌಶಲ ಹಾಗೂ ಯುವಜನತೆ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ಕೇಳಿ ಕಲಿಯುವುದಕ್ಕಿಂತ, ಪ್ರಾಯೋಗಿಕ ಅನುಭವದಿಂದ ಕೌಶಲ ಹೊಂದಲು ಸಾಧ್ಯವಾಗುತ್ತದೆ. ಐಟಿಐನಲ್ಲಿ ಪ್ರಾಯೋಗಿಕ ನಿಪುಣತೆಗೆ ಹೆಚ್ಚು ಮಹತ್ವ ಇದೆ. ಕೈಗಾರಿಕಾ ತಂತ್ರಜ್ಞಾನ ಅರಿತರೆ ನೌಕರಿಗಾಗಿ ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದರು.
ಸರ್ಕಾರಿ ಐಟಿಐ ಗುಣಾತ್ಮಕ ಶಿಕ್ಷಣದ ಜತೆಗೆ ಕುಶಲಕರ್ಮಿಗಳಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟಿರುವುದು ಶ್ಲಾಘನೀಯ ಎಂದರು.
ಬೆಂಗಳೂರಿನ ತಾಂತ್ರಿಕ ಸಲಹೆಗಾರ ಟಿ. ಜಯರಾಮ ಮಾತನಾಡಿ, ಜುಲೈನಲ್ಲಿ ಐದು ಕಂಪನಿಗಳು ಸರ್ಕಾರಿ ಐಟಿಐಗೆ ಕ್ಯಾಂಪಸ್ ಸಂದರ್ಶನಕ್ಕೆ ಬರಲು ಒಪ್ಪಿಕೊಂಡಿವೆ ಎಂದು ತಿಳಿಸಿದರು.
ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ, ಬೀದರ್ಗೆ ಬರಲು ಅನೇಕ ಕೈಗಾರಿಕೆಗಳು ತುದಿಗಾಲ ಮೇಲೆ ನಿಂತಿವೆ. ಐಟಿಐ ಕಲಿತವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.
ತಾಂತ್ರಿಕ ಸಲಹೆಗಾರರರಾದ ಸಾಕ್ಷಿ, ಶೈಲಾ, ಸಾರಾ, ಚೆನಿರಾಜ ತಮ್ಮ ಅನುಭವ ಹಂಚಿಕೊಂಡರು. ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಪ್ರಕಾಶ ಜನವಾಡಕರ್ ಸ್ವಾಗತಿಸಿದರು. ತರಬೇತಿ ಅಧಿಕಾರಿ ಪ್ರಶಾಂತ ನಿರೂಪಿಸಿದರು. ಬಾಬು ಪ್ರಭಾಜಿ ವಂದಿಸಿದರು.