ಬಸವಕಲ್ಯಾಣ: ‘ಕಾಂಗ್ರೆಸ್ ಸಾಧನೆಯ ವ್ಯಾಪಕ ಪ್ರಚಾರದಿಂದ ಮತದಾರರ ಮನಸ್ಸು ಗೆಲ್ಲಬಹುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಬಸವಕಲ್ಯಾಣ ನಗರಸಭೆ ಅಭಿವೃದ್ಧಿಗೆ ಕಳೆದ ಸಲ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅನುದಾನ ಒದಗಿಸಲಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದು ನಮ್ಮದೇ ಪಕ್ಷ, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಗೋರುಚ ಸಮಿತಿ ರಚಿಸಿ ₹600 ಕೋಟಿಯ ಕ್ರಿಯಾಯೋಜನೆ ಸಿದ್ಧಪಡಿಸಿರುವುದು ಕೂಡ ನಮ್ಮದೇ ಪಕ್ಷವಾದರೂ ಬಿಜೆಪಿಯವರು ಕಾಂಗ್ರೆಸ್ನವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸುತ್ತಾರೆ. ಆದರೆ ಅವರೇನು ಮಾಡಿದ್ದಾರೆ ಎಂಬುದನ್ನು ಅವರಿಗೆ ಸಿಕ್ಕಸಿಕ್ಕಲ್ಲಿ ಪ್ರಶ್ನಿಸಬೇಕಾಗಿದೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಪಕ್ಷದವರೇ ಆಗಿದ್ದ ಬಿ.ನಾರಾಯಣ ರಾವ್ ಅವರು ಇಲ್ಲಿನ ಶಾಸಕರಾಗಿದ್ದರು. ಅವರು ಕೈಗೊಂಡ ಕೆಲಸ ನೋಡಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು’ ಎಂದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ್, ನಗರ ಘಟಕದ ಅಧ್ಯಕ್ಷ ಅಜರಅಲಿ ನವರಂಗ, ಪ್ರಮುಖ ರಾದ ಶಾಂತಪ್ಪ ಪಾಟೀಲ, ಶಿವರಾಜ ನರಶೆಟ್ಟಿ, ಬಾಬು ಹೊನ್ನಾನಾಯಕ್, ಆನಂದ ದೇವಪ್ಪ, ಶಂಕರರಾವ್ ಜಮಾದಾರ, ಸುಧಾಕರ ಗುರ್ಜರ್, ಬಸೀರೊದ್ದೀನ್ ಮಾತನಾಡಿದರು.
ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಶಂಕರ ದೊಡ್ಡಿ, ಅಂಬಾದಾಸ ಘೋಡೆ, ರವೀಂದ್ರ ಬೋರೋಳೆ, ದಿಲೀಪ ಶಿಂಧೆ, ಮನೋಜ ಮಾಶೆಟ್ಟೆ, ಸಂದೀಪ ಬುಯ್ಯೆ, ರೈಯಿಸೊದ್ದೀನ್ ಉಪಸ್ಥಿತರಿದ್ದರು.