ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರನ ಭೀಮನಗರ ಬಡಾವಣೆಯಲ್ಲಿ ಎರಡು ವಾರಗಳಿಂದ ಕುಡಿಯುವ ನೀರು ಪೂರೈಸದ ಕಾರಣ ಮಹಿಳೆಯರು ಮಂಗಳವಾರ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ತಮಟೆ ಬಾರಿಸುತ್ತ, ಖಾಲಿ ಕೊಡಗಳನ್ನು ಹಿಡಿದು ಬಂದ ಮಹಿಳೆಯರು ಮತ್ತು ಮಕ್ಕಳು ಬೇಕೆ ಬೇಕು ನೀರು ಬೇಕು ಎಂದು ಘೋಷಣೆಗಳನ್ನು ಕೂಗಿದರು.
ಪಂಪ್ಸೆಟ್ನ ಮೋಟಾರ್ ದುರಸ್ತಿ ಕೈಗೊಳ್ಳದೆ ಹಾಗೂ ವಿದ್ಯುತ್ ಸಮಸ್ಯೆಯ ಕಾರಣ 15 ದಿನಗಳಿಂದ ಓಣಿಯಲ್ಲಿನ ನಳಕ್ಕೆ ನೀರಿಲ್ಲ.
ಮಳೆಯಲ್ಲಿ ಮೈ ತೋಯಿಸುತ್ತಲೇ ಬೇರೆ ಕಡೆಗಳಿಂದ ಕೊಡಗಳನ್ನು ತಲೆಮೇಲೆ ಹೊತ್ತು ತರಬೇಕಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪಿಡಿಒ ಹಾಗೂ ಇತರರಿಗೆ ತಿಳಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಇನ್ನು ಮುಂದೆ ಸಮಸ್ಯೆ ಬಗೆಹರಿಯದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಪೈಪ್ಲೈನ್ ಹಾಗೂ ಮೋಟಾರ್ ದುರಸ್ತಿ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಮನೆಗೆ ಮರಳಿದರು.
ಓಣಿ ನಿವಾಸಿಗಳಾದ ದಯಾನಂದ ಶಹಾಜಿ, ಸಂತೋಷ, ಪ್ರವೀಣ, ರಾಜೀವ ಗಡ್ಡದ, ಅಜಯ ತೋಬರೆ, ಶಾಮಸುಂದರ ಸಜ್ಜನ್, ಇಂದ್ರಜೀತ್, ಪ್ರವೀಣ ಮಸನೆ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.