‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಜನತಾ ಕಾಲೋನಿಗೆ ಪ್ರಾಥಮಿಕ ಸೌಲಭ್ಯವನ್ನು ಒದಗಿಸುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯ ತನಕ ಬೀದಿ ದೀಪವನ್ನು ಕೊಟ್ಟಿದ್ದು ಬಿಟ್ಟರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ. ನಾವು ಬೆಂಗಳೂರಿನಲ್ಲಿ ಇದ್ದೇವೊ ಅಥವಾ ಯಾವುದಾದರೂ ಕುಗ್ರಾಮದಲ್ಲಿ ಇದ್ದೇವೊ ಎನ್ನುವ ಅನುಮಾನ ಬರುತ್ತದೆ’ ಎಂದು ಗ್ರಾಮದ ನಿವಾಸಿ ಹನುಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯ ನಾಗಭೂಷಣ್, ‘ಈ ವರ್ಷ ಕೊರೆಸಿದ ಕೊಳವೆಬಾವಿ ಮುಂದಿನ ವರ್ಷಕ್ಕೆ ಬತ್ತಿ ಹೋಗುತ್ತದೆ. ಶೆಟ್ಟಿಹಳ್ಳಿ ಕೆರೆಯಲ್ಲಿ ನೀರು ಇದ್ದರೆ ಮಾತ್ರ ಅಂತರ್ಜಲ ಇರುತ್ತದೆ. ಶುದ್ಧ ನೀರಿನ ಘಟಕ ಸ್ಥಾಪಿಸಿಲು ನೀರಿನ ಕೊರತೆ ಇದೆ. ಮೊತ್ತೊಂದು ಕೊಳವೆಬಾವಿ ಕೊರೆಸಲಾಗುತ್ತಿದ್ದು, ಶೀಘ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.