ಭಾಲ್ಕಿ: ‘ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವ ನಿಟ್ಟಿನಲ್ಲಿ ಪ್ರತಿ ಮಗುವಿಗೆ ಮೊಟ್ಟೆ, ಮೊಟ್ಟೆ ತಿನ್ನದ ಮಗುವಿಗೆ ಬಾಳೆ ಹಣ್ಣು ವಿತರಿಸಲು ಸರ್ಕಾರ ನಿರ್ಧರಿಸಿದೆ. ಶಿಕ್ಷಕರು ಎಲ್ಲ ಮಕ್ಕಳ ಪಾಲಕರಿಂದ ಮಕ್ಕಳು ಮೊಟ್ಟೆ, ಬಾಳೆ ಹಣ್ಣು ತಿನ್ನುವ ಬಗ್ಗೆ ಅನುಮತಿ ಪತ್ರ ಪಡೆದು ಮೊಟ್ಟೆ ವಿತರಿಸಬೇಕು’ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ಅಕ್ಷರ ದಾಸೋಹ ಯೋಜನೆಯ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣಾ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೊಟ್ಟೆ ಖರೀದಿ ಮತ್ತು ವಿತರಣೆಗೆ ಮೇಲುಸ್ತುವಾರಿ ಸಮಿತಿ ರಚಿಸಿ ಕಾರ್ಯ ನಿರ್ವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಅನುದಾನಿತ ಶಾಲೆಗಳಲ್ಲಿ ಸಂಸ್ಥೆಯ ಅಧ್ಯಕ್ಷರು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕು. ಮುಖ್ಯಶಿಕ್ಷಕರು ಕಾರ್ಯದರ್ಶಿಗಳಾಗಿ ಯೋಜನೆಯ ಮಹತ್ವಾಕಾಂಕ್ಷಿಯನ್ನು ಜಾರಿಗೆ ತರಬೇಕು ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಹಣಮಂತ ರಾಯ ಹರನಾಳ ಮಾತನಾಡಿ, ಮೊಟ್ಟೆ ಮತ್ತು ಬಾಳೆಹಣ್ಣುಗಳು ದಾಖಲಾತಿಗೆ ಅನುಗುಣವಾಗಿ ಖರೀದಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಇಸಿಓ ಜಿ. ಸಹದೇವ ಅವರು ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು. ಇಸಿಓ ಜಯರಾಮ ಬಿರಾದಾರ ಉಚಿತ ಪಠ್ಯ ಪುಸ್ತಕಗಳ ಮಾಹಿತಿಯನ್ನು ಎಸ್ಎಟಿಎಸ್ನಲ್ಲಿ ಭರ್ತಿ ಮಾಡುವ ಬಗ್ಗೆ ಮಾತನಾಡಿದರು.
ಬಿಆರ್ಪಿ ಶಕುಂತಲಾ ಸಾಲಮನಿ ನಿಷ್ಟಾ ತರಬೇತಿ ಸೇರಿದಂತೆ ಇತರೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ಬಸವರಾಜ ಪಕ್ಕಾ, ಚಂದ್ರಕಾಂತ ಖಂಡಾಳೆ, ಅನಿಲ್ ಗಾಯಕವಾಡ, ಶ್ರೀಕಾಂತ ಮೂಲಗೆ, ಗುರಯ್ಯಾ ಸ್ವಾಮಿ ಇದ್ದರು.