ಬಹಳಷ್ಟು ಹಳ್ಳಿಗಳಲ್ಲಿ, ಸಂಜೆಯಾದರೆ ಸಾಕು ದಿನವೆಲ್ಲಾ ದುಡಿದ ಹಣವನ್ನು ಗಂಡಸರು ಮದ್ಯದ ಅಂಗಡಿಯಲ್ಲಿ ಸುರುವಿ, ಪಾನಮತ್ತರಾಗಿ ಬಂದು ಮನೆಗಳಲ್ಲಿ ಗಲಾಟೆ ಎಬ್ಬಿಸುವ ಸಂಗತಿ ಸಾಮಾನ್ಯವೆಂಬಂತಾಗಿದೆ. ಹೀಗಾಗಿ ಅದೆಷ್ಟೋ ಮನೆಗಳು ಸಂಕಷ್ಟ ಅನುಭವಿಸುತ್ತಿವೆ. ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವ ಅನೇಕರು ತಮ್ಮ ಹಳ್ಳಿಗಳಲ್ಲಿ ಮದ್ಯದಂಗಡಿ ಇಲ್ಲದಿದ್ದರೆ ಪಕ್ಕದ ಹಳ್ಳಿಗೆ ಹೋಗುತ್ತಾರೆ. ಚುನಾವಣೆಯ ಸಮಯದಲ್ಲಿ ಎಲ್ಲೆಲ್ಲೂ ಕುಡುಕರದೇ ಕಾರುಬಾರು. ಈ ಸ್ಥಿತಿ ಬದಲಾಗಬೇಕು. ಯಳಂದೂರು ತಾಲ್ಲೂಕಿನ ಹಳ್ಳಿಗಳನ್ನು ನೋಡಿಯಾದರೂ ನಮ್ಮ ಜನರಲ್ಲಿ ಜಾಗೃತಿ ಮೂಡಲೆಂದು ಆಶಿಸೋಣ.