ಕಮಲನಗರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಭಾರಿ ಗುಡುಗು ಸಹಿತ ಮಳೆ ಸುರಿಯಿತು.
ರಸ್ತೆ, ಚರಂಡಿಗಳು ಸಂಪೂರ್ಣ ಜಲಾವೃತಗೊಂಡವು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಮಳೆಯಿಂದ ಮುಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲವಾಗಿದೆ. ರೈತರು ಸೋಯಾ ಬಿತ್ತನೆಗೆ ಭೂಮಿ ಹದಗೊಳಿಸುತ್ತಿದ್ದಾರೆ.
ತಾಲ್ಲೂಕಿನ ದಾಬಕಾ ಚಕ್ಲಿ, ತೋರ್ಣಾ, ಬಸನಾಳ ಗ್ರಾಮದ ಚರಂಡಿ ನೀರು ರಸ್ತೆ ಮೇಲೆ ಹರಿಯಿತು.
ಮಳೆಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ, ಬಿಇಒ ಕಚೇರಿ, ಎಪಿಎಂಸಿ ಆವರಣ ಸೇರಿ ಸರ್ಕಾರಿ ಕಚೇರಿಗಳ ಅಂಗಳಕ್ಕೆ ನೀರು ನುಗ್ಗಿ ಕೆರೆಯಾಗಿ ಮಾರ್ಪಟ್ಟವು.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರಿದು ಜನರಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮಹಾದೇವ ಬಿರಾದಾರ ಒತ್ತಾಯಿಸಿದ್ದಾರೆ.