ಕಮಲನಗರ: ತಾಲ್ಲೂಕಿನಾದ್ಯಂತ ಗುರುವಾರ ಸತತವಾಗಿ ಎರಡು ಗಂಟೆ ಮಳೆ ಸುರಿದಿದ್ದರಿಂದ ಹಳ್ಳಕೊಳ್ಳಗಳು ತುಂಬಿ ಹರಿದವು.
ಮಳೆಗೆ ನೀರು ಉಕ್ಕಿ ಹರಿದ ಹಳ್ಳ ಚಂದನವಾಡಿ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಸೋನಾಳವಾಡಿ-ಹುಲಸೂರು, ಕಳಗಾಪುರ– ಸಂಗಮ, ಡಿಗ್ಗಿ- ಚ್ಯಾಂಡೇಶ್ವರ, ಮುರ್ಕಿ-ಚಿಕ್ಲಿ(ಯು), ಬೆಳಕುಣಿ-ಡೋಣಗಾಂವ್(ಎಂ), ಡೋಣಗಾಂವ್– ಹಂದಿಕೇರಾ ಮತ್ತು ಕಮಲನಗರ-ರಾಂಪುರ ನಡುವಿನ ಸೇತುವೆಗಳು ಮುಳುಗಡೆ ಯಾಗಿವೆ. ಇದರಿಂದ ಈ ಗ್ರಾಮಗ ಳಲ್ಲಿಸಂಪರ್ಕಕಂಡಿತ ಗೊಂಡಿದೆ.
ತಾಲ್ಲೂಕಿನ ಸೋನಾಳ, ಸೋನಾಳವಾಡಿ, ಡಿಗ್ಗಿ, ಕಮಲನಗರ, ತೋರಣಾ, ಡೋಣಗಾಂವ್, ಬೆಳಕುಣಿ, ದಾಬಕಾ ಸೇರಿದಂತೆ ಇತರೆಡೆ ವ್ಯಾಪಕವಾಗಿ ಮಳೆಯಾಗಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಹಾದೇವ ಪಾಟೀಲ ತಿಳಿಸಿದರು.
ಹಳ್ಳಕೊಳ್ಳಗಳು ತುಂಬಿಹರಿದು ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ ಎಂದು ಸೋನಾಳ ಗ್ರಾಮದ ಅಂಕುಶ ಹಣಮಶೇಟ್ಟೆ ಹೇಳಿದರು.
ಶಿವನ ಪ್ರತಿಮೆ ಸುತ್ತ ನೀರು
ಔರಾದ್: ತಾಲ್ಲೂಕಿನ ಸಂತಪುರ ಹೋಬಳಿಯ ವಿವಿಧೆಡೆ ಗುರುವಾರ ಸಂಜೆ ಭಾರಿ ಮಳೆಯಾಗಿದೆ.
ವಡಗಾಂವ್ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿದು ಸಂಚಾರ ಅಡೆಚಣೆಯಾಯಿತು. ಕೆಲವು ಮನೆಗಳಿಗೂ ನೀರು ನುಗ್ಗಿದೆ.
ಗ್ರಾಮದ ಬಸವ ಮಂಟಪದಲ್ಲೂ ನೀರು ಬಂದು ಶಿವನ ಪ್ರತಿಮೆ ಸುತ್ತ ನೀರು ನಿಂತಿದೆ. ಬೋರಳ ಗ್ರಾಮದಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ನೀರು ಒಳ ಹರಿವು ಜಾಸ್ತಿಯಾಗಿದೆ. ಇದರಿಂದಾಗಿ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ.