ಬೀದರ್: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಗರದ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪೂರ್ಣಿಮಾ ಚಂದ್ರಕಾಂತ ಪ್ರಥಮ ಬಹುಮಾನ ಪಡೆದರು.
ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೋನಿಕಾ ಭಾಸ್ಕರ್ ದ್ವಿತೀಯ ಮತ್ತು ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಭಾವನಾ ಭೀಮಾಶಂಕರ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಕ್ರಮವಾಗಿ ರೂ, 2,000, ರೂ. 1,000 ಹಾಗೂ ರೂ. 500 ನಗದು ಬಹುಮಾನ ವಿತರಿಸಿದರು.
ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಕ್ಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅನೇಕ ವಿದ್ಯಾರ್ಥಿನಿಯರು ಸಮಾಜಕ್ಕೆ ಸಂದೇಶ ನೀಡುವ ವಿಭಿನ್ನ ಕಲ್ಪನೆಯ ರಂಗೋಲಿಗಳನ್ನು ಬಿಡಿಸಿ ಗಮನ ಸೆಳೆದಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಬಿರಾದಾರ ಹೇಳಿದರು.
ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗೂ ಪಠ್ಯದಷ್ಟೇ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ದತ್ತು ರೆಡ್ಡಿ ಹಾಗೂ ಅಶೋಕ ಮುಖ್ಯ ಅತಿಥಿಯಾಗಿದ್ದರು. ಉಪನ್ಯಾಸಕರಾದ ಲಕ್ಷ್ಮೀಕಾಂತ ಸೂರೆ, ರವಿರಾಮ, ಗಜಾನಂದ ಅಮರ, ಪೂಜಾ, ಸುನೀತಾ, ಪ್ರಗತಿ, ದಿವ್ಯಾ, ಪೂಜಾಶ್ರೀ, ಪ್ರೀತಿ ಕನ್ನಾ ಉಪಸ್ಥಿತರಿದ್ದರು