ಬೀದರ್: ‘ಬಸವಾದಿ ಶರಣರು ನಡೆ ನುಡಿ ಒಂದಾಗಿಸಿಕೊಂಡು ರಚಿಸಿದ ವಚನಗಳು ಪರುಶ ಮಣಿಯಂತೆ ಇವೆ’ ಎಂದು ಲಿಂಗಾಯತ ಮಹಾಮಠದ ಪ್ರಭುದೇವರು ಅಭಿಪ್ರಾಯಪಟ್ಟರು.
ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ‘ಬೀದರ್ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶರಣರು ಬರೆದ ವಚನಗಳು ಸತ್ಯದ ಕಲ್ಪನೆ, ಸಕಾರಾತ್ಮಕ ಚಿಂತನೆಯಿಂದ ಕೂಡಿವೆ. ಸಮಾಜದಲ್ಲಿನ ಮೂಢನಂಬಿಕೆ ಹೋಗಲಾಡಿಸಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ’ ಎಂದು ನುಡಿದರು.
‘ಆಧುನಿಕ ಬರಹಗಾರರು ವಚನಕಾರರೆಂದು ಕರೆಯಿಸಿಕೊಳ್ಳದೇ ನಡೆ, ನುಡಿ ಒಂದಾಗಿಸಿಕೊಂಡು ವಚನಗಳಲ್ಲಿನ ಮೌಲ್ಯಗಳ ಬಗ್ಗೆ ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸುಕಾಲೆ ಮಾತನಾಡಿ, ‘ ಬರಹಗಾರರು ಗಿಳಿ ಪಾಠ ಮಾಡಬಾರದು. ಸಾಹಿತ್ಯದ ಒಳಹೊಕ್ಕು ಅರಿವಿನ ಪ್ರಜ್ಞೆಯಿಂದ ಹೊರಹೊಮ್ಮಿದರೆ ಅದಕ್ಕೊಂದು ಮೆರುಗು ಬರುತ್ತದೆ’ ಎಂದು ತಿಳಿಸಿದರು.
‘ವಚನವೆಂದರೆ ಒಂದು ರೋಮಾಂಚನ. ಅದು ಅಂತರಾಳದ ಮಾತು. ಅದು ಅನುಭವದ ಸಾಹಿತ್ಯವಾಗಿದೆ’ ಎಂದರು.
ಸಾಹಿತಿ ಮುಕ್ತುಂಬಿ ಮಾತನಾಡಿ,‘ 21ನೇ ಶತಮಾನದ ವಚನಕಾರರು ಬಹಳಷ್ಟಿದ್ದಾರೆ. ಆದರೆ ನಡೆ ನುಡಿ ಒಂದಾಗಿಸಿಕೊಂಡವರು ಯಾರೂ ಇಲ್ಲ. ಸಾವಿರಾರು ಆಧುನಿಕ ವಚನಗಳು ಬಂದಿವೆ. ಆಧುನಿಕ ವಚನಗಳಲ್ಲಿ ಅದೇ ವಚನ ಸಾಹಿತ್ಯದ ಪದಗಳನ್ನು ಬಳಸಿಕೊಂಡು ಬರೆಯಲಾಗಿದೆ’ ಎಂದರು.
‘ಪ್ರಸ್ತುತ ದಿನಗಳಲ್ಲಿ ಎಲ್ಲರಲ್ಲಿಯೂ ನಾನು, ನಮ್ಮದುಎನ್ನುವುದು ಅವತರಿಸಿದೆ. ಆದರೆ ಅಂದಿನ ಶರಣರಲ್ಲಿ ನಾವು, ನಮ್ಮದು ಎನ್ನುವುದು ಅಂತರ್ಗತವಾಗಿತ್ತು’ ಎಂದು ತಿಳಿಸಿದರು.