ಘೋಡಂಪಳ್ಳಿ (ಜನವಾಡ): ‘ನಾಡಿನ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಹೊಣೆಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.
ನೀಲಾಂಬಿಕಾ ಮಹಿಳಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಹೋಗದಲ್ಲಿ ಆಯೋಜಿಸಿದ್ದ ‘ನಮ್ಮ ನೆಲೆ -ನಮ್ಮ ಕಲೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲೆಗಳನ್ನು ಪೋಷಿಸುವುದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಧನ ಸಹಾಯವನ್ನೂ ಮಾಡುತ್ತಿದೆ. ಅದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಹಿರಿಯ ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ, ‘ಮುಂದಿನ ಪೀಳಿಗೆಗೆ ಇಂದಿನ ಕಲೆ ಮಾದರಿಯಾಗಬೇಕು. ಮಕ್ಕಳಲ್ಲಿ ಓದಿನ ಜತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ತೊಡಗಿಸಿಕೊಳ್ಳಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಅಟಲ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರಾಶುಂಪಾಲ ಶರಣಪ್ಪ ಬಿರಾದಾರ ಇದ್ದರು.
ಶಂಭುಲಿಂಗ ವಾಲ್ದೊಡ್ಡಿ ಭಾವಗೀತೆ, ನಾಗಪ್ಪ ಖಾಸೆಂಪೂರ ಮೊಹರಂ ಪದ, ಮನೋಹರ ಹುಪಳಾ ಮತ್ತು ತಂಡದವರು ಸಾಂಪ್ರದಾಯ ಪದ, ರಘುನಾಥ ಹಡಪದ ಮತ್ತು ತಂಡ ತತ್ವಪದ, ಸಂಜುಕುಮಾರ ಮತ್ತು ತಂಡ ಜಾನಪದ ಗಾಯನ, ತುಕಾರಾಮ ಭೋಲೆ- ಜಾನಪದ ಜಾದೂ, ಭವಾನಿ ಮತ್ತು ತಂಡ ಭರತನಾಟ್ಯ ಪ್ರದರ್ಶಿಸಿದರು.
ಸಂಸ್ಥೆಯ ಅಧ್ಯಕ್ಷೆ ಸಿದ್ದಮ್ಮ ಬಸವಣ್ಣನೋವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.