ಬೀದರ್: ‘ಇಂದಿನ ಮಕ್ಕಳಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಅಗತ್ಯ ಇದೆ’ ಎಂದು ಗುರುನಾನಕ್ ದೇವ ಎಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ ಎಕಲಾರಕರ್ ಅಭಿಪ್ರಾಯಪಟ್ಟರು.
ಇಲ್ಲಿಯ ಗುರುನಾನಕ್ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬೃಹತ್ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ವಿಜ್ಞಾನದ ಬಗೆಗೆ ಕುತೂಹಲ ಇರಬೇಕು. ಅಂದಾಗ ಮಾತ್ರ ಕಲಿಕೆಗೆ ಹಾಗೂ ಹೊಸ ಸಂಶೋಧನೆಗೆ ಪ್ರೇರಣೆ ದೊರೆಯುತ್ತದೆ’ ಎಂದು ತಿಳಿಸಿದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರವು ಸಮಗ್ರ ಶಿಕ್ಷಣ ಅಭಿಯಾನದಡಿಯಲ್ಲಿ ಹಲವು ವರ್ಷಗಳಿಂದ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಕಂಪ್ಯೂಟರ್ ಅತಿ ವೇಗವಾಗಿ ಕೆಲಸ ಮಾಡುವ ಸಾಧನವಾಗಿರಬಹುದು. ಮನುಷ್ಯನ ಮಿದುಳಿಗೆ ಅದಕ್ಕಿಂತ ವೇಗವಾಗಿ ಆಲೋಚನೆ ಮಾಡುವ ಶಕ್ತಿ ಇದೆ’ ಎಂದು ತಿಳಿಸಿದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ, ಪ್ರಾದೇಶಿಕ ಮುಖ್ಯಸ್ಥೆ ಗೀತಾ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿಠೋಬಾ ಪತ್ತಾರ್, ಸರ್ವ ಶಿಕ್ಷಣ ಅಭಿಯಾನ, ನೋಡಲ್ ಅಧಿಕಾರಿ ಗುಂಡಪ್ಪ ಹುಡುಗೆ ಮಾತನಾಡಿದರು.
ವಿಜ್ಞಾನ ಶಿಕ್ಷಕರಾದ ದೇವಿಪ್ರಸಾದ ಕಲಾಲ್, ಸಂಜೀವಕುಮಾರ ಸ್ವಾಮಿ, ರವಿ ಕುಮನೂರು, ವಿಜಯಕಲಾ, ಮಹೇಶಕುಮಾರ, ವಿರಾಜ್, ವೀರೇಶ, ಸೂರ್ಯಕಾಂತ, ವೈಶಾಲಿ, ವಿಶಾಲ, ಹಾವಪ್ಪ ಇದ್ದರು. ಬಾಬುರಾವ್ ಎನ್.ಎಸ್. ಸ್ವಾಗತಿಸಿದರು. ರತ್ನದೀಪ ಕಸ್ತೂರೆ ನಿರೂಪಿಸಿದರು. ಪಲ್ಲವಿ ವಂದಿಸಿದರು.