ಬಸವಕಲ್ಯಾಣ: ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿನ ಪ್ರಮುಖ ಮಠ, ದೇವಸ್ಥಾನ ಹಾಗೂ ದರ್ಗಾಗಳಿಗೆ ಭೇಟಿ ನೀಡಿದರು.
ನಗರದ ರಾಜಾ ಬಾಗಸವಾರ ದರ್ಗಾದಲ್ಲಿ ದರ್ಗಾ ಮುಖ್ಯಸ್ಥ ಜಿಯಾ ಪಾಶಾ ಜಾಗೀರದಾರ ಮತ್ತು ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಚನ್ನವೀರ ಶಿವಾಚಾರ್ಯರು ಶರಣು ಅವರನ್ನು ಸನ್ಮಾನಿಸಿದರು.
ಮುಡಬಿಯಲ್ಲಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಹಿರೇನಾಗಾಂವ ಶಾಂತಲಿಂಗೇಶ್ವರ ಮಠದಲ್ಲಿ ಜಯಶಾಂತಲಿಂಗ ಶಿವಾಚಾರ್ಯರನ್ನು ಭೇಟಿಯಾದರು. ನಗರದ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಎಲ್ಲ ಪ್ರಮುಖ ವೃತ್ತಗಳಲ್ಲಿನ ಮೂರ್ತಿಗಳಿಗೆ ಪುಷ್ಪಮಾಲೆ ಹಾಕಿ ನಮಸ್ಕರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಚಂದ್ರಶೇಖರ ಪಾಟೀಲ, ಶಾಂತವಿಜಯ ಪಾಟೀಲ, ಸಿದ್ದು ಬಿರಾದಾರ, ರತಿಕಾಂತ ಕೊಹಿನೂರ, ಹಣಮಂತ ಧನಶೆಟ್ಟಿ, ಮಹಾಂತಯ್ಯ ಸ್ವಾಮಿ ಪಾಲ್ಗೊಂಡಿದ್ದರು.