ಬೀದರ್: ಜಿಲ್ಲೆಗೆ ಡಾ. ಸಿದ್ದಾರೆಡ್ಡಿ ಕುಟುಂಬದ ಸೇವೆ ಮಾದರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ ನುಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತೆ ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಇಲ್ಲಿಯ ಭಾರತೀಯ ಕುಟುಂಬ ಯೋಜನಾ ಸಂಘದ ಸ್ಥಳೀಯ ಶಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರಮ್ಮ ಸಿದ್ದಾರೆಡ್ಡಿ ಅವರು ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಸಂಘದ ಕೇಂದ್ರ ಕಚೇರಿ ಗೌರವ ಖಜಾಂಚಿ ಡಾ. ಆರತಿ ರಘು, ಸ್ಥಳೀಯ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ, ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಅವರು, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ, ಸ್ಕೌಟ್ಸ್ ಮತ್ತು ಗೈಡ್ಸ್ಗೆ ಗುರಮ್ಮ ಸಿದ್ದಾರೆಡ್ಡಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಜಿಲ್ಲೆಯ ಜನರ ಪ್ರೀತಿ, ವಿಶ್ವಾಸ, ಸಹಕಾರ, ಬೆಂಬಲದಿಂದಾಗಿ ಸಾಮಾಜಿಕ ಕಾರ್ಯ ಕೈಗೊಳ್ಳಲು ಸಾಧ್ಯವಾಯಿತು ಎಂದು ಸನ್ಮಾನ ಸ್ವೀಕರಿಸಿದ ಗುರಮ್ಮ ಸಿದ್ದಾರೆಡ್ಡಿ ಹೇಳಿದರು.
ಸಂಸ್ಥೆಯ ಸ್ಥಳೀಯ ಶಾಖೆ ಉಪಾಧ್ಯಕ್ಷೆ ಡಾ. ಸವಿತಾ ಚಾಕೋತೆ, ಕಾರ್ಯಕಾರಿಣಿ ಸದಸ್ಯರಾದ ಸುಭಾಷ್ ಬಶೆಟ್ಟಿ, ಪದ್ಮಜಾ ವಿಶ್ವಕರ್ಮ, ಡಾ. ಎಸ್.ಸಿ. ಲಲಿತಮ್ಮ ಇದ್ದರು.