ಔರಾದ್: ‘ವ್ಯಸನ ಮನುಷ್ಯ ಹಾಗೂ ಸಮಾಜವನ್ನು ಹಾಳು ಮಾಡುತ್ತದೆ. ಯಾರು ಇದಕ್ಕೆ ತಮ್ಮ ಬಳಿ ಬರಲು ಅವಕಾಶ ಕೊಡುವುದಿಲ್ಲವೋ ಅಂಥ ವ್ಯಕ್ತಿ ಹಾಗೂ ಸಮಾಜ ಸ್ವಾಸ್ಥ್ಯವಾಗಿರುತ್ತದೆ’ ಎಂದು ಪಿಎಸ್ಐ ಸಿದ್ದಣ್ಣ ಗಿರಿಗೌಡರ್ ಹೇಳಿದರು.
ತಾಲ್ಲೂಕಿನ ಸಂತಪುರದ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಾಗಾರ ಹಾಗೂ ಮಾದಕ ದ್ರವ್ಯ ಸೇವನೆ ಹಾಗೂ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾದಕ ದ್ರವ್ಯ ಸೇವನೆ ಬಹಳ ಅಪಾಯಕಾರಿ. ಈ ವಿಷಯದಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ದೊಡ್ಡ ದೊಡ್ಡ ನಗರಗಳಿಗೆ ಓದಲು ಹೋದ ವಿದ್ಯಾರ್ಥಿಗಳು ಇಂಥ ಚಟಗಳಿಗೆ ಬಲಿಯಾಗಿ ಭವಿಷ್ಯ ಹಾಳು ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ’ ಎಂದು ಎಚ್ಚರಿಸಿದರು.
ಸಂಪನ್ಮೂಲ ಶಿಕ್ಷಕಿ ಮಹಾನಂದ ಯಂಡೆ ಮಾತನಾಡಿ,‘ಸಿದ್ಧರಾಮೇಶ್ವರ ಕಾಲೇಜಿನಲ್ಲಿ 57ನೇ ಪುನಶ್ಚೇತನ ಕಾರ್ಯಾಗಾರ ನಡೆಯುತ್ತಿರುವುದು ಸಂತಸದ ಸಂಗತಿ’ ಎಂದು ಹೇಳಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿದರು.
ಉಪನ್ಯಾಸಕಿ ಮೀರಾ ತಾಯಿ, ಕಲ್ಲಪ್ಪ ಬುಟ್ಟೆ, ಸುಧಾ ಕೌಟಗೆ, ವನದೇವಿ ಎಕ್ಕಳ್ಳೆ, ಈರಮ್ಮ ಕಟಗಿ ಹಾಗೂ ಅಂಬಿಕಾ ವಿಶ್ವಕರ್ಮ ಅವರು ಇದ್ದರು.