ಕಮಲನಗರ: ಕಳೆದ ಎರಡು ವಾರದಿಂದ ದಾಬಕಾ ವಲಯದಲ್ಲಿ ನಿತ್ಯ ಮಳೆ ಸುರಿಯುತ್ತಿವ ಕಾರಣ ಕಟಾವಿಗೆ ಬಂದ ಸೋಯಾಬಿನ್ ಬೆಳೆ ರಾಶಿ ಮಾಡಲು ಅಡ್ಡಿಯುಂಟು ಮಾಡಿದೆ.
ಅಲ್ಪ ಮಳೆಗೂ ಸಮೃದ್ಧವಾಗಿ ಹೊಲದಲ್ಲಿ ಬೆಳೆದ ಸೋಯಾ ಇದೀಗ ರೈತರ ಕಣ್ಣು ಮುಂದೆ ಬೆಳೆ ಹಾಳಾಗುತ್ತಿರುವುದನ್ನು ಕಂಡು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಮೊದಲ ಮಳೆ ಸುರಿದಾಗ ಹಾಕಿದ ಸೋಯಾ ಬೆಳೆ ರಾಶಿ ಮಾಡಿಕೊಂಡಿದ್ದಾರೆ. ತಡವಾಗಿ ಬಿತ್ತನೆ ಮಾಡಿದ ರೈತರಿಗೆ ರಾಶಿ ಮಾಡಲು ಮಳೆ ಅಡ್ಡಿಯಾಗಿದೆ. ಸೋಯಾ ಕೂಡಿಟ್ಟವರಿಗೆ ಮಳೆ ಅಡ್ಡಿಯುಂಟು ಮಾಡಿದೆ. ಕೆಲ ರೈತರಿಗೆ ಹೊಲದಲ್ಲಿ ಕಟಾವು ಮಾಡಲು ಸಹ ಸಾಧ್ಯವಾಗಿಲ್ಲ.
ಮುಂಗಾರು ಬೆಳೆ ಮೇಲೆ ಮಾತ್ರ ಅವಲಂಬಿತರಾದ ಬಹುತೇಕ ರೈತರು ಆತಂಕಗೊಂಡಿದ್ದಾರೆ. ಚಿಂತಾಕ್ರಾಂತರು ಆಗಿರುವ ರೈತರು ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ.
ಸಾಲ ಮಾಡಿ ಹೇಗೋ ಕಪ್ಪು ಹೊಲದಲ್ಲಿ ಹಸಿರು ಗೆರೆಗಳ ಸಾಲು ಹರಿದಿತ್ತು. ಕಳೆದ ಬಾರಿ ಮಳೆ ಇಲ್ಲದೆ ಬೆಳೆ ಕಳೆದುಕೊಂಡು ಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಆದರೆ, ಈ ವರ್ಷ ಕಟಾವಿಗೆ ಬಂದ ಸಮಯದಲ್ಲಿ ಅಧಿಕ ಮಳೆಯಿಂದಾಗಿ ರೈತರನ್ನು ಮತ್ತಷ್ಟು ಕಷ್ಟಕ್ಕೆ ನೂಕಿದೆ.
ಹೀಗಾಗಿ ರೈತರಿಗೆ ಸೂಕ್ತ ಪರಿಹಾರ ನೀಡಿ ನೆರವಾಗುವಂತೆ ಗಂಗನಬೀಡ ಗ್ರಾಮದ ಸಂಭಾಜೀ ಬ್ರಿಗೇಡ್ ಸಂಘಟನೆ ಅಧ್ಯಕ್ಷ ಅಂಕುಶ ಕಾರಬರಿ ಒತ್ತಾಯಿಸಿದ್ದಾರೆ.