ಬೀದರ್: ‘ತಂದೆ–ತಾಯಿ ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದರೆ, ಇಂದು ಪೌಢಾವಸ್ಥೆಗೆ ಬರುವವರಿಗೆ ಅವರ ನೆರವು ಪಡೆದು ನಂತರ ಮನೆಯಿಂದ ಹೊರ ಕಳಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಖೇದಕರ ಸಂಗತಿಯಾಗಿದೆ‘ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ ಅರಳಿ ತಿಳಿಸಿದರು.
ನಗರದ ಸಿ.ಎಂ.ಸಿ ಕಾಲೊನಿಯ ಎಸ್.ಬಿ.ಕುಚಬಾಳ ಅವರ ಭೀಮ ನಿಲಯದಲ್ಲಿ ಆಯೋಜಿಸಿದ್ದ ಜನ ಜನಿತ ಕಲಾ ಪ್ರದರ್ಶನ ಸಂಘ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪೂಜ್ಯ ಮಾತಾ ಪಿತರ ಪುಣ್ಯನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅವಿಭಕ್ತ ಕುಟುಂಬ ಇದ್ದಾಗ ಕುಟುಂಬದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರಕುತ್ತಿತ್ತು. ಇಂದು ಕುಟುಂಬಗಳು ಚಿಕ್ಕವಿದ್ದರೂ ಉತ್ತಮ ಸಂಸ್ಕಾರ ದೊರಕುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲುಂಬಿಣಿ ಗೌತಮ, ಕಾರ್ಯದರ್ಶಿ ಸಂಗೀತಾ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ಅಭಿಮಾನಿಗಳ ಸಂಘದ ಅಧ್ಯಕ್ಷ ಬಕ್ಕಪ್ಪ ತಾರೆ ಮಾತನಾಡಿದರು.
ಸಂಗೀತಾ ಕಾಂಬಳೆ ಭೀಮ ಗೀತೆ ಹಾಡಿದರು. ಪ್ರೀತಂ ಕುಚಬಾಳ ಗೀತೆ ಹಾಡಿದರು. ಜಾನಪದ ಪರಿಷತ್ತು ತಾಲ್ಲೂಕು ಘಟಕದ ಬಸವರಾಜ ಹೆಗ್ಗೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಶ್ರೀಧರ ಜಾಧವ ಇದ್ದರು. ಜೈಭೀಮ ಕುಚಬಾಳ ಸ್ವಾಗತಿಸಿದರು. ಪ್ರಕಾಶ ಕುಚಬಾಳ ವಂದಿಸಿದರು.