ಬೀದರ್: ನಗರದ ಬೀದರ್-ಜಹೀರಾಬಾದ್ ಮುಖ್ಯರಸ್ತೆಯ ಶಹಾಪುರ ಗೇಟ್ ಬಳಿ ಇರುವ ಸೇಂಟ್ ಜೋಸೆಫ್ ಚರ್ಚ್ನಲ್ಲಿ 40ನೇ ವಾರ್ಷಿಕೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ರಾಬರ್ಟ್ ಮೈಕಲ್ ಮಿರಾಂಡ ಅವರು, ಚರ್ಚ್ಗಳು, ಕ್ರೈಸ್ತ ಸಂಘ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ಉತ್ತಮ ಸಮಾಜ ನಿರ್ಮಾಣವೇ ಚರ್ಚ್ಗಳ ಧ್ಯೇಯವಾಗಿದೆ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಬಸವರಾಜ ಮೂಲಗೆ ಅವರು ಸಮಾಜಕ್ಕೆ ಕ್ರೈಸ್ತರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಬರ್ಟ್ ಮೈಕಲ್ ಮಿರಾಂಡ ಅವರನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್ ಹಾಗೂ ನೇತೃತ್ವ ವಹಿಸಿದ್ದ ಫಾದರ್ ವಿಲ್ಸನ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ವೆಲ್ಮೆಗ್ನಾ ನೇತ್ರ ಆಸ್ಪತ್ರೆಯ ಮುಖ್ಯಸ್ಥೆ ಡಾ. ಸಿಬಿಲ್ ಸಾಲಿನ್ಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಮೊದಲಾದವರು ಇದ್ದರು.