ಬೀದರ್: ‘ಸುಭಾಷ್ಚಂದ್ರ ಬೋಸ್ ಅಪ್ಪಟ ದೇಶಭಕ್ತರಾಗಿದ್ದರು’ ಎಂದು ಜನಸೇವಾ ಶಾಲೆಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಇಲ್ಲಿಯ ಪ್ರತಾಪನಗರದ ಜನಸೇವಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಸುಭಾಷ್ಚಂದ್ರ ಭೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಸಂಕಲ್ಪ ತೊಟ್ಟು ಸ್ವತಂತ್ರ ಸೈನ್ಯ ಕಟ್ಟಿದ್ದರು’ ಎಂದು ತಿಳಿಸಿದರು.
‘ಲಂಡನ್ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಐಸಿಎಸ್ ಪರೀಕ್ಷೆ ಉತ್ತೀರ್ಣರಾದ ಅವರಿಗೆ ಅನೇಕ ಅವಕಾಶಗಳು ಬಂದವು. ಆದರೆ, ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ಐಸಿಎಸ್ ಪದವಿಗೆ ಹಿಂದಿರುಗಿದರು. ಭಾರತಕ್ಕೆ ಬಂದು ಯುವಕರ ಸೈನ್ಯ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು’ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಸ್ವಾಗತಿಸಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಟೈಗರ್ಸ್ ಸಮಿತಿ: ಕರ್ನಾಟಕ ಟೈಗರ್ಸ್ ಹೋರಾಟ ಸಮಿತಿಯ ವತಿಯಿಂದ ಇಲ್ಲಿಯ ಮಂಗಲಪೇಟ್ನಲ್ಲಿರುವ ಸುಭಾಷ್ಚಂದ್ರ ಬೋಸ್ ವೃತ್ತದಲ್ಲಿ ಸುಭಾಷ್ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು.
ಸುಭಾಷ್ಚಂದ್ರ ಬೋಸ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕರ್ನಾಟಕ ಟೈಗರ್ಸ್ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಅಲಿಖಾನ್, ‘ಸುಭಾಷ್ಚಂದ್ರ ಬೋಸ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದರು’ ಎಂದು ಎಂದು ಹೇಳಿದರು.
‘ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಶಾಲಾ ಕಾಲೇಜುಗಳಲ್ಲಿ ಅವರ ಜೀವನ ಚರಿತ್ರೆಯ ಮಾಹಿತಿ ನೀಡಬೇಕು’ ಎಂದರು.
ಸಮಿತಿಯ ಪದಾಧಿಕಾರಿಗಳಾದ ಅಜರ್ ಪಟೇಲ್, ಇಲಿಯಾಸ್ ಮಲಿಕ್, ಅಯೂಬ್, ಗುಂಡೋಜಿ, ದತ್ತು, ರಾಮಚಂದ್ರ ದಿಗ್ವಾಲ್ ಇದ್ದರು.