ಜನವಾಡ: ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ವಲಸೆ ಹೋಗದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿಯ ಜಿಲ್ಲಾ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಸಂಯೋಜಕ ಮರೆಪ್ಪ ಸಿ. ಹರವಾಳ್ಕರ್ ಹೇಳಿದರು.
ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಬಹುದು. ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕೋಳಿ ಶೆಡ್, ಬಚ್ಚಲು ಇಂಗುಗುಂಡಿ, ಕೆರೆ ಹೂಳೆತ್ತುವಿಕೆ, ಕ್ಷೇತ್ರ ಬದು ನಿರ್ಮಾಣ ಮಾಡಬಹುದಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದೆ. ದಿನಕ್ಕೆ ರೂ. 289 ಕೂಲಿ ಹಾಗೂ ರೂ. 10 ಸಲಕರಣೆ ವೆಚ್ಚ ಕೊಡಲಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮಕುಮಾರ ಮಾತನಾಡಿ, ಕಾಮಗಾರಿಗಾಗಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲಾಗುವುದು ಎಂದು ತಿಳಿಸಿದರು.
ನಂತರ ಪಂಚಾಯಿತಿ ವ್ಯಾಪ್ತಿಯ ಕನ್ನಳ್ಳಿ, ಹಿಪ್ಪಳಗಾಂವ ಗ್ರಾಮಗಳ ಮನೆ ಮನೆಗೆ ಪಂಚಾಯಿತಿ ಸಿಬ್ಬಂದಿ ಭೇಟಿ ಕೊಟ್ಟು ಕಾರ್ಮಿಕರಿಗೆ ಯೋಜನೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಯೇಶಪ್ಪ, ಸಂಜೀವಕುಮಾರ, ಸಂತೋಷ ಇದ್ದರು.