ಬೀದರ್: ನೇತ್ರ ಆರೋಗ್ಯದ ಕುರಿತು ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ರೂಹಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಕಾರ್ಯದರ್ಶಿ ಅಜಿಜ್ಖಾನ್ ಸಲಹೆ ನೀಡಿದರು.
ನಗರದ ಚಿದ್ರಿ ರಿಂಗ್ ರಸ್ತೆ ಸಮೀಪದ ಬಿದ್ರಿ ಕಾಲೊನಿಯಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿದ್ರಿ ಕಲಾವಿದರಿಗೆ ಆಯೋಜಿಸಿರುವ ಎರಡು ದಿನಗಳ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಶುಕ್ರವಾರ ಸಸಿಗೆ ನೀರೆರೆದು ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಪ್ರಸಿದ್ಧ ಬಿದ್ರಿ ಕಲೆ ಬೀದರ್ನಲ್ಲಿ ಮಾತ್ರ ಕಾಣಸಿಗುತ್ತದೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಿದ್ರಿ ಕಲಾವಿದರ ಪಾತ್ರ ಬಹಳ ಮಹತ್ವದ್ದಾಗಿದೆ. ಬಿದ್ರಿ ಕಲಾಕೃತಿಗಳ ರಚನೆ ಅತಿಸೂಕ್ಷ್ಮ ಕೆಲಸವಾಗಿರುವ ಕಾರಣ ಕಲಾವಿದರು ನೇತ್ರ ಆರೋಗ್ಯ ಕಾಪಾಡಬೇಕು.
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಬೇಕು ಎಂದು ಹೇಳಿದರು. ಬಿದ್ರಿ ಕಲಾವಿದರಿಗೆ ನೆರವಾಗಲು ಹಮ್ಮಿಕೊಂಡಿರುವ ಶಿಬಿರದಲ್ಲಿ ನೇತ್ರ ತಪಾಸಣೆ ಜತೆಗೆ ದೃಷ್ಟಿದೋಷ ಕಂಡು ಬಂದವರಿಗೆ ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಯೂ ಉಚಿತ ಇದೆ. ಕಲಾವಿದರು ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಕಾಂತ ಶಂಕರರಾವ್ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಂಕರೆಪ್ಪ ಬೊಮ್ಮಾ, ಬಿದ್ರಿ ಹ್ಯಾಂಡಿಕ್ರಾಫ್ಟ್ ಡಾಟ್ ಕಾಂ ಅಧ್ಯಕ್ಷ ಎಂ.ಡಿ. ಸಲೀಮೊದ್ದಿನ್ ಇದ್ದರು.
ಬೆಂಗಳೂರಿನ ಸಂಕಾರಾ ನೇತ್ರ ಆಸ್ಪತ್ರೆಯ ಡಾ. ಯಶ್, ಡಾ. ವಿವೇಕ್ ಸೇರಿದಂತೆ ಆರು ಜನ ನೇತ್ರ ತಪಾಸಣೆ ನಡೆಸಿದರು. ದೃಷ್ಟಿ ದೋಷ ಕಂಡು ಬಂದವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದರು.
ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಆಡಳಿತ, ಶಾಸಕ ರಹೀಂಖಾನ್, ಸಂಕಾರಾ ನೇತ್ರ ಆಸ್ಪತ್ರೆ, ರೂಹಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಬಿದ್ರಿ ಹ್ಯಾಂಡಿಕ್ರಾಫ್ಟ್ ಡಾಟ್ ಕಾಂ ಹಾಗೂ ಬಿದ್ರಿ ಹ್ಯಾಂಡಿಕ್ರಾಫ್ಟ್ ಅಸೋಸಿಯೇಶನ್ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. ಶಿಬಿರ ಶನಿವಾರವೂ ನಡೆಯಲಿದೆ.