ಚಿಟಗುಪ್ಪ: ‘ಪುಣ್ಯಸ್ಥಳಗಳ ಅಭಿವೃದ್ಧಿಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ನಾಗರಿಕರಲ್ಲಿ ಭಾವೈಕ್ಯತೆ ಬೆಳೆಯುತ್ತದೆ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿದರು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿಯ ಬಾಲಮ್ಮ ದೇವಸ್ಥಾನ ಹಾಗೂ ಹುಸೇನಿ ಭಾಷಾ ದರ್ಗಾದಲ್ಲಿ ಬುಧವಾರ ಸಮುದಾಯ ಭವನಗಳ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
‘ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಈ ಭವನಗಳ ನಿರ್ಮಾಣಕ್ಕೆ ಶುಭ ಗಳಿಗೆ ಕೂಡಿಬಂದಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು. ಹಲವು ವರ್ಷಗಳ ವರೆಗೂ ನಾಗರಿಕರಿಗೆ ಸದ್ಬಳಕೆ ಆಗುವಂತಾಗಬೇಕು’ ಎಂದರು.
ಜೆಡಿಎಸ್ ಮುಖಂಡ ಸಂತೋಷ ರಾಸೂರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ ಹಳ್ಳಿಖೇಡ, ಫಾರೂಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ಕನಕ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನರಾಜ್ ಹಾಗೂ ದೇಗುಲ, ದರ್ಗಾದ ಪದಾಧಿಕಾರಿ ಇದ್ದರು.