ಬೀದರ್: ಭಗತ್ಸಿಂಗ್ ಯುತ್ ಬ್ರಿಗೇಡ್ 73ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಗರದಲ್ಲಿ ಗುರುವಾರ ಒಂದು ಕಿ.ಮೀ. ಉದ್ದದ ತ್ರಿವರ್ಣ ಧ್ವಜದ ಯಾತ್ರೆ ನಡೆಸಿತು.
ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಟ್ಟೆಯಲ್ಲಿ ಸಿದ್ಧಪಡಿಸಿದ ತ್ರಿವರ್ಣ ಧ್ವಜ ಹಿಡಿದು ಯಾತ್ರೆಯಲ್ಲಿ ಸಾಗಿದರು.
ಪಾಪನಾಶ ಮುಖ್ಯ ದ್ವಾರದಿಂದ ಆರಂಭವಾದ ಯಾತ್ರೆಯು ಬರೀದ್ಶಾಹಿ ಉದ್ಯಾನ, ಮಡಿವಾಳ ಮಾಚಿದೇವ ವೃತ್ತ, ರೋಟರಿ ವೃತ್ತ, ಜಿಲ್ಲಾ ಆಸ್ಪತ್ರೆ ತಿರುವು, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಭಗತ್ಸಿಂಗ್ ವೃತ್ತಕ್ಕೆ ತಲುಪಿ ಮುಕ್ತಾಯಗೊಂಡಿತು.
ಸಾರ್ವಜನಿಕರ ಗಮನ ಸೆಳೆದ ಬೃಹತ್ ಧ್ವಜವು ದೇಶಾಭಿಮಾನ ಜಾಗೃತಗೊಳಿಸಿತು.
ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರು, ಭಗತ್ಸಿಂಗ್ ಯುತ್ ಬ್ರಿಗೇಡ್ನ ಜಸ್ಪ್ರೀತ್ಸಿಂಗ್ ಮೌಂಟಿ, ನಗರಸಭೆ ಮಾಜಿ ಸದಸ್ಯ ರವಿ ಸ್ವಾಮಿ, ವಿರೂಪಾಕ್ಷ ಗಾದಗಿ, ಶ್ರೀಮಂತ ಸಪಾಟೆ, ಶಿವಾನಂದ ಪಾಟೀಲ, ನಾಗೇಶ ಮೊದಲಾದವರು ಭಾಗವಹಿಸಿದ್ದರು.