ಬೀದರ್: ಲೋಕಸಭಾ ಚುನಾವಣೆ-2019ರ ಮತ ಎಣಿಕೆ ಸಿಬ್ಬಂದಿಗೆ 2ನೇ ಹಂತದ ತರಬೇತಿ ಬುಧವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು.
ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಮಾತನಾಡಿ, ‘ಮೇ 23ರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಮತ ಎಣಿಕೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಬೆಳಿಗ್ಗೆ 6 ಗಂಟೆಗೆ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು’ ಎಂದು ತಿಳಿಸಿದರು.
‘ಮತ ಎಣಿಕೆ ಕೇಂದ್ರದಲ್ಲಿ ಗುರುತಿನ ಚೀಟಿ ಹೊಂದಿರದ ಯಾರೊಬ್ಬರಿಗೂ ಪ್ರವೇಶ ಇರುವುದಿಲ್ಲ. ಹಾಗಾಗಿ ತಮಗೆ ನೀಡಿರುವ ಗುರುತಿನ ಚೀಟಿಯೊಂದಿಗೆ ಬರಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಕೂಡದು. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್್ ಫೋನ್ಗಳನ್ನ ನಿಷೇಧಿಸಲಾಗಿದೆ’ ಎಂದು ಹೇಳಿದರು.
‘ಒಟ್ಟು 14 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಸಿಬ್ಬಂದಿ ತಮಗೆ ವಹಿಸಿದ ಟೇಬಲ್ ಮೇಲೆ ಕುಳಿತುಕೊಳ್ಳಬೇಕು. ಪ್ರತಿ ಟೇಬಲ್ನಲ್ಲಿ ಒಬ್ಬರು ಮತ ಎಣಿಕೆ ಮೇಲ್ವಿಚಾಕರು, ಸಹಾಯಕರು ಹಾಗೂ ಮೈಕ್ರೊ ವೀಕ್ಷಕರು ಇರುತ್ತಾರೆ. ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತ ಯಂತ್ರಗಳನ್ನು ತೆರೆಯುವುದು, ಮತ ಎಣಿಕೆ, ನಿಗದಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ವಿಧಾನ ಹಾಗೂ ಚುನಾವಣಾ ಸಿಬ್ಬಂದಿ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ವಿವರಣೆ ನೀಡಿದರು.
ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಮಾತನಾಡಿ, ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದಂತೆ ಮತ ಎಣಿಕೆ ಕರ್ತವ್ಯವನ್ನು ಸಹ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ತರಬೇತಿಯಲ್ಲಿ ತಿಳಿಸಲಾದ ಸಲಹೆ-ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕೆಲಸದ ವೇಳೆ ಯಾವುದೇ ಲೋಪಗಳಿಗೆ ಆಸ್ಪದ ನೀಡಬಾರದು’ ಎಂದು ತಿಳಿಸಿದರು.
ಮತ ಎಣಿಕೆ ವೀಕ್ಷಕರಾದ ಸವೀನ್ ಬನ್ಸಾಲ್, ವಂದಿತಾ ವೈದ್ಯ, ಬಿ.ರಾಮಾರಾವ್, ಹೆಚ್ಚವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಚುನಾವಣಾಧಿಕಾರಿಗಳು ಇದ್ದರು.