ಬೀದರ್: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 130ನೇ ಜಯಂತಿ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಸಿದ್ಧಿ ತಾಲೀಂ ವಸತಿ ನಿಲಯದಲ್ಲಿ ಪರಿವರ್ತನಾ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಬುದ್ದ, ಬಸವ, ಅಂಬೇಡ್ಕರ್ ಯುವ ಸಂಘದ ಸಂಸ್ಥಾಪಕ ಮಹೇಶ ಗೋರನಾಳಕರ್ ಮಾತನಾಡಿ, ‘ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು ಹಾಗೂ ಮೂಲನಿವಾಸಿಗಳು ಸುಶಿಕ್ಷಿತರಾಗಿ ಸುಂದರ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು’ ಎಂದರು.
ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ನಾಟೇಕರ್ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಕೆ.ಆರ್.ನಾರಾಯಣ್ ನಮಗೆ ಪ್ರೇರಣೆಯಾಗಿದ್ದಾರೆ. ಅವರಂತೆ ವಿಧ್ಯಾರ್ಥಿಗಳು ಓದಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಚಿಗುರು ಟ್ರಸ್ಟ್ ಅಧ್ಯಕ್ಷ ಶಿವರಾಜ್ ತಡಪಳ್ಳಿ, ಮಹಾತ್ಮ ಜ್ಯೋತಿ ಬಾ ಫುಲೆ ಯುವಕ ಸಂಘದ ಅಧ್ಯಕ್ಷ ಪವನಕುಮಾರ ಮಿಠಾರೆ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯದ ಮೆಲ್ವಿಚಾರಕಿ ಶಾರದಾ ಬಬಲಾ, ಸುಜಾತಾ, ಗೀತಾ ಉದಗಿರೆ, ಯುವ ಮುಖಂಡರಾದ ಸತೀಶ ವರ್ಮಾ ಹಾಗೂ ಬಸವರಾಜ ಚಿಕ್ಕಪೇಟ ಇದ್ದರು.
ವಿದ್ಯಾರ್ಥಿ ಬಾಲಜಿ ನಿರೂಪಿಸಿದರು. ಸಿದ್ದಿ ತಾಲಿಂ ವಸತಿ ನಿಲಯದ ಮೇಲ್ವಿಚಾರಕಿ ವಿಜಯಕುಮಾರಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.