ಶಹಾಬಾದ್: ತಾಲ್ಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಬಳಿ ಭಾನುವಾರ ಸಂಜೆ ಲಾರಿ, ಮಿನಿ ಲಾರಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಭಾರಿ ಪ್ರಮಾಣದ ಬೆಂಕಿ ಹತ್ತಿಕೊಂಡಿದ್ದು, ಎರಡು ವಾಹನಗಳ ಚಾಲಕರು ಸಜೀವ ದಹನರಾಗಿದ್ದಾರೆ.
ಚಿಕ್ಕೋಡಿಯಿಂದ ಹೈದರಾಬಾದ್ಗೆ ಹೊರಟಿದ್ದ ಸಕ್ಕರೆ ತುಂಬಿದ ಲಾರಿ ಮತ್ತು ಕಲಬುರಗಿ ತಾಲ್ಲೂಕಿನ ನಂದೂರ ಭಾಗದಿಂದ ಮದ್ಯ ತುಂಬಿಕೊಂಡು ಕೊಪ್ಪಳಕ್ಕೆ ಹೋಗುತ್ತಿದ್ದ ಮಿನಿ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ.
ಅತಿ ವೇಗದಿಂದ ಅಪಘಾತವಾಗಿದ್ದು ಡಿಕ್ಕಿಯಾದ ರಭಸಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿದೆ. ಲಾರಿಯಲ್ಲಿ ಸಿಕ್ಕಿಬಿದ್ದಿದ್ದ ಚಾಲಕರು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಲಾರಿ ಚಾಲಕನನ್ನು ಸಿಂದಗಿಯ ಈರಣ್ಣ ಎಂದು ಗುರುತಿಸಲಾಗಿದ್ದು ಮಿನಿ ಲಾರಿ ಚಾಲಕನನ್ನು ಶಹಾಬಾದ್ ಇಂದಿರಾ ನಗರ ಮಡ್ಡಿಯ ಖಾಜಾ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಶಹಾಬಾದ್ ಠಾಣೆ ಪೊಲೀಸರು ಚಿತ್ತಾಪುರ, ಜೇವರ್ಗಿಯಿಂದ ಅಗ್ನಿಶಾಮಕ ದಳವನ್ನು ಕರೆಸಿ, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸುಮಾರು ಎರಡು ಗಂಟೆ ನಂತರ ಬೆಂಕಿ ಹತೋಟಿಗೆ ಬಂದಿತ್ತಾದರು, ಮದ್ಯ ಇದ್ದಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವ್ಯೆಎಸ್ಪಿ ಉಮೇಶ ಚೌಕಿಮಠ, ಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಂಗಮ್ಮಾ, ಎಎಸ್ಐ ಸಾತಲಿಂಗಪ್ಪ, ವೆಂಕಟೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.