ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಮಂಗಳವಾರ ಪಾದಯಾತ್ರೆ ನಡೆಸಿ ಗ್ರಾಮದ ವಿವಿಧ ಬಡಾವಣೆಗಳ ನಿವಾಸಿಗಳ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಹಾಕಿಸಿದರು.
ಗ್ರಾಮದ ಆಲ್ ಅಮೀನ್ ಶಾಲೆ ಸುತ್ತಲಿನ ನಿವಾಸಿಗರು ಲಸಿಕೆ ಪಡೆಯಲು ನಿರಾಕರಿಸಿದ ಕಾರಣ ಜಿಲ್ಲಾಧಿಕಾರಿ ಮನೆಗಳಿಗೆ, ಮಸೀದಿಗಳಿಗೆ ಭೇಟಿ ನೀಡಿ ಸಂಜೆವರೆಗೂ ಮುಸ್ಲಿಮ್ ಸಮುದಾಯದ ನಾಗರಿಕರಿಗೆ ಲಸಿಕೆ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಿ ಸ್ಥಳದಲ್ಲಿಯೇ ಲಸಿಕೆ ಕೊಡಿಸಿದರು.
ಗ್ರಾಮದ 150 ನಾಗರಿಕರಿಗೆ ಲಸಿಕೆ ಹಾಕಿಸಿ ಮಾತನಾಡಿ,‘ಕೋವಿಡ್ ಲಸಿಕೆ ಕುರಿತು ಅನುಮಾನ ಬೇಡ. ತಜ್ಞರು ಆಳವಾದ ಸಂಶೋಧನೆ ನಡೆಸಿ ಆರೋಗ್ಯ ರಕ್ಷಣೆಗೆ ಲಸಿಕೆ ಸಿದ್ಧಪಡಿಸಿದ್ದಾರೆ. ಅದರಿಂದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಭಯಪಡುವ ಅಗತ್ಯವಿಲ್ಲ. ಎಲ್ಲರೂ ಸ್ವಇಚ್ಛೆಯಿಂದ ಲಸಿಕೆ ಪಡೆಯಬೇಕು’ ಎಂದು ಅವರುಹೇಳಿದರು.
ಜಿಲ್ಲಾ ವೈದ್ಯಾಧಿಕಾರಿ ವಿ.ಜಿ.ರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ರವಿಕುಮಾರ ದಾಮಾ, ತಾ.ಪಂ ಇಒ ಡಾ. ಗೋವಿಂದ್, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಇದ್ದರು.