ಜನವಾಡ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಭಾಲ್ಕಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಸೆಪ್ಟೆಂಬರ್ 20 ರ ವರೆಗೆ ನಡೆಯಲಿರುವ 2019-20ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮಗಳಾದ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
‘ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ದಿಸೆಯಲ್ಲಿ ವಾರ್ತಾ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಚಿಮಕೋಡ ಕಲಾ ತಂಡದ ವೀಣಾ ದೇವಿದಾಸ ಚಿಮಕೋಡ, ಬಕ್ಕಪ್ಪ ದಂಡಿನ್, ಯಲ್ಲಾಲಿಂಗ ಸುಣಗಾರ, ನಂದೀಶ್ವರ ನಾಟ್ಯ ಸಂಘದ ದೇವಿದಾಸ ಚಿಮಕೋಡ, ಶಾಂತಮ್ಮ ಡೊಣಗಾಪುರ, ಸಿದ್ಧಲಿಂಗ ಸುಣಗಾರ ಹಾಗೂ ಸಂಗಡಿಗರು ಜಾನಪದ ಹಾಡು ಹಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಸಿಬ್ಬಂದಿ ವಿಜಯಕೃಷ್ಣ ಸೋಲಪುರ, ಬಿಂದುಸಾರ ಧನ್ನೂರ, ತುಳಜಪ್ಪ ಬುಧೇರಾ, ಓಷಿನ್, ಸುಧಾರಾಣಿ, ಅವಿನಾಶ ಇದ್ದರು.