ಬೀದರ್: ‘ಎಲ್ಲ ದಾನಗಳಲ್ಲಿ ಮತದಾನ ಶ್ರೇಷ್ಠವಾಗಿದೆ. ಅದು ಕೇವಲ ಮತ ದಾನವಲ್ಲ ಜನತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಅಸಾಮಾನ್ಯವಾದ ಶಕ್ತಿಯಾಗಿದೆ’ ಎಂದು ಪ್ರಾಚಾರ್ಯೆ ವಿದ್ಯಾವತಿ ಬಲ್ಲೂರ ಹೇಳಿದರು.
ಕರಾಶಿ ಸಂಸ್ಥೆಯ ಎಂ.ಎಸ್.ಮುದ್ದಣ್ಣ ಡಿ.ಎಲ್.ಇಡಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹುದೊಡ್ಡ ಮಹತ್ವವಿದೆ. ತಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡುವ ಅಥವಾ ನಿರಾಕರಿಸುವ ಅವಕಾಶ ಇದೆ. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ನಿಷ್ಪಕ್ಷಪಾತದಿಂದ ಸಂವಿಧಾನ ಬದ್ಧವಾದ ಮತಾಧಿಕಾರವನ್ನು ಚಲಾಯಿಸಬೇಕು’ ಎಂದರು.
ಗುರುಬಸಯ್ಯ ಮಾತನಾಡಿ, ‘ದೇಶದ ಪ್ರತಿಯೊಬ್ಬ ನಾಗರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮತಹಕ್ಕು ಚಲಾಯಿಸಬೇಕು’ ಎಂದು ಹೇಳಿದರು.
ಮತದಾನ ಜಾಗೃತಿ ಅಂಗವಾಗಿ ಗಾಯನ ಹಾಗೂ ರಂಗೋಲಿಸ್ಪರ್ಧೆ ಏರ್ಪಡಿಸಲಾಗಿತ್ತು. ಸುಧಾರಾಣಿ ಹಾಗೂ ಕಾವ್ಯಶ್ರೀ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕರಾದ ಪ್ರಭು ಉದ್ಗಿರೆ, ಬಸವರಾಜ ದೇಶಮುಖ ಇದ್ದರು. ನವಿನಾ ಸ್ವಾಗತಿಸಿದರು. ನಾಗೇಶ್ವರಿ ನಿರೂಪಿಸಿದರು. ಪೂಜಾಶ್ರೀ ವಂದಿಸಿದರು