ಅಲಿಯಂಬರ್ (ಜನವಾಡ): ‘ನನಗೆ ಬಣ್ಣ ಹಚ್ಚಿ ಮಾತನಾಡಲು ಬರಲ್ಲ. ಕೆಲಸ ಮಾಡಿ ತೋರಿಸುವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಕುಮಾರ ಹೆಬ್ಬಾಳೆ ಹೇಳಿದರು.
ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮತದಾರರು ಅವಕಾಶ ನೀಡಿದರೆ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸುವ ಕಾರ್ಯವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ ಮಾತನಾಡಿ, ಈ ಬಾರಿಯ ಚುನಾವಣೆ ಯಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ರಾಜಕುಮಾರ ಹೆಬ್ಬಾಳೆ ಶ್ರಮಜೀವಿಯಾಗಿದ್ದಾರೆ. ಜಿಲ್ಲೆಯ ಐವರು ಕಲಾವಿದರಿಗೆ ಕೇಂದ್ರ ಹಾಗೂ ಎರಡು ಸಾವಿರಕ್ಕೂ ಅಧಿಕ ಕಲಾವಿದರಿಗೆ ರಾಜ್ಯ ಸರ್ಕಾರದ ಮಾಸಾಶನ ಮಾಡಿಸಿದ್ದಾರೆ. ಹೀಗಾಗಿ ಮತದಾರರು ಅವರನ್ನು ಬೆಂಬಲಿಸಬೇಕು ಎಂದರು.
ಗ್ರಾಮದ ಮುಖಂಡ ಕಲ್ಯಾಣರಾವ್ ಉಪ್ಪೆ ಮಾತನಾಡಿ, ಸುರೇಶ ಚನಶೆಟ್ಟಿ ಅವರು ಕಳೆದ ಚುನಾವಣೆಯಲ್ಲಿ ಗೆದ್ದ ನಂತರ ಒಮ್ಮೆಯೂ ಅಲಿಯಂಬರ್ನತ್ತ ಮುಖ ಮಾಡಿಲ್ಲ. ಗ್ರಾಮದಲ್ಲಿ ಕಾರ್ಯಕ್ರಮ ನಡೆಸುವುದಾಗಿ ಅವರು ನೀಡಿದ್ದ ಭರವಸೆ ಹುಸಿಯಾಗಿದೆ. ಈ ಬಾರಿ ಸಾಹಿತ್ಯ ಹಾಗೂ ಜನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಕುಮಾರ ಹೆಬ್ಬಾಳೆ ಅವರಿಗೆ ಗ್ರಾಮದ ಮತದಾರರ ಬೆಂಬಲ ಇದೆ ಎಂದು ತಿಳಿಸಿದರು.