ಬೀದರ್: ಚುನಾವಣೆ ಸೂಕ್ಷ್ಮ ವೀಕ್ಷಕರು ಜಾಗರೂಕತೆಯಿಂದ ಕೆಲಸ ಮಾಡಬೇಕು. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಜಿಲ್ಲೆಯ 225 ಸೂಕ್ಷ್ಮ ವೀಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ. ಗೌತಮ ಅರಳಿ ಮಾತನಾಡಿ, ವೀಕ್ಷಕರು ಮತದಾನ ದಿನ ಮತಗಟ್ಟೆಯಲ್ಲಿ ಕುಳಿತು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸಬೇಕು ಎಂದು ತಿಳಿಸಿದರು.
ಮತಗಟ್ಟೆಯಲ್ಲಿ ವಿಡಿಯೋಗ್ರಫಿ ಕಡ್ಡಾಯವಾಗಿ ಆಗುತ್ತಿದೆಯೇ, ಮತದಾನಕ್ಕೆ ಬರುವವರು ಮತದಾನ ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದಾರೆಯೇ ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಚುನಾವಣಾ ವೀಕ್ಷಕಿ ಕಾವೇರಿ ಡಿ.ಬಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಚುನಾವಣಾ ಶಾಖೆಯ ಸತ್ಯದೀಪ ಮನಗೋಳಿ ಇದ್ದರು.