ಕಮಲನಗರ: ಕಲಿಯುವ, ಕಲಿಸುವ ಪ್ರಕ್ರಿಯೆಯಲ್ಲಿ ಕಂಡು ಬಂದ ಉತ್ತಮ ಅಂಶಗಳು ಹಾಗೂ ಕಠಿಣ ಸನ್ನಿವೇಶಗಳನ್ನು ವಿಷಯವಾರು ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಒಂದೆಡೆ ಸೇರಿ ಪರಸ್ಪರ ಹಂಚಿಕೊಳ್ಳಲು ಅಂತರ ಸಮಾಲೋಚನಾ ಕಾರ್ಯಾಗಾರ ವೇದಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ್ ಹೇಳಿದರು.
ಹೊಳಸಮುದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಕಲಿಯೋಣ ಬನ್ನಿ ವೃತ್ತಿಪರ ಅಭಿವೃದ್ಧಿ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
2019-20ರ ಸಾಲಿನಲ್ಲಿ ಪ್ರತಿ ಸಮಾಲೋಚನಾ ವೇದಿಕೆಯು ಸಭೆಯಾಗಿ ಉಳಿಯದೆ ಕಾರ್ಯಾಗಾರವಾಗಬೇಕೆಂಬುದು ಆಶಯವಾಗಿದೆ. ಸಾಮಾನ್ಯವಾಗಿ ಕಾರ್ಯಾಗಾರದಲ್ಲಿ ವೃತ್ತಪರ ಅಭಿವೃದ್ಧಿಯಿರುತ್ತದೆ. ಅಂತ್ಯದಲ್ಲಿ ಬೌದ್ಧಿಕ ಉತ್ಪನ್ನವಿರುತ್ತದೆ. ಆದ್ದರಿಂದ ಈ ಬಾರಿಯ ಸಮಾಲೋಚನಾ ವೇದಿಕೆಗಳಿಗೆ ಕಲಿಯೋಣ ಬನ್ನಿ- ವೃತ್ತಿಪರ ಅಭಿವೃದ್ಧಿ ಸಮಾಲೋಚನೆ ಎಂದು ಕರೆಯಲಾಗಿದ್ದು, ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯರೆಡ್ಡಿ ಮಾತನಾಡಿ, ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿಸಿ ಸ್ವ ಪ್ರೇರಣೆಯಿಂದ ವೃತ್ತಿಪರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿ, ಶಾಲಾ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳ ಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ ಶಿಕ್ಷಕರನ್ನು ರೂಪಿಸುವುದೇ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ರೋಹಿದಾಸ ಮೇತ್ರೆ, ಸಂತೋಷ ಮುಧಾಳೆ, ನಾಗೇಶ ಸಂಗಮೆ ಮಾತನಾಡಿದರು. ಮುಖ್ಯಶಿಕ್ಷಕ ಮನೋಹರರಾವ ಜಾಧವ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ವಿಜಯಕುಮಾರ ನುದನೂರೆ, ಬಸವರಾಜ ಮಹಾಜನ, ಸಂಜೀವಕುಮಾರ ಶ್ರೀಗಿರೆ, ಸಂಜೀವನ ಬಿರಾದಾರ, ಪ್ರಶಾಂತ ಕಾಳೆ, ಸೂರ್ಯಕಾಂತ ಮಹಾಜನ, ನೀಲಕಂಠ ತಲವಾಡೆ, ಪ್ರಶಾಂತ ಇದ್ದರು.