ಹುಮನಾಬಾದ್: ‘ಫಲವತ್ತಾದ ಮಣ್ಣಿನಿಂದ ಮಾತ್ರ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯ’ ಎಂದು ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಹೇಳಿದರು.
ತಾಲ್ಲೂಕಿನ ಬೇನಚಿಂಚೋಳಿ ಗ್ರಾಮದ ತೋಟವೊಂದರಲ್ಲಿ ಪರಿಸರ ವಾಹಿನಿ ಆಯೋಜಿಸಿದ್ದ ವಿಶ್ವ ಮಣ್ಣಿನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣಿನ ಸಂರಕ್ಷಣೆಗೆ ಗಿಡ–ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು. ರಾಸಾಯನಿಕ ಗೊಬ್ಬರ ಮತು ಕ್ರಿಮಿನಾಶಕ ಸಿಂಪಡಣೆಯಿಂದ ಮಣ್ಣು ಮಲಿನವಾಗುತ್ತದೆ. ಹೀಗಾಗಿ ರೈತರು ದೇಶಿಯ ಗೊಬ್ಬರ ಜೀವಾಮೃತ ಮತ್ತು ಗೋಕೃಪಾಮೃತ ಬಳಸಬೇಕು ಎಂದು ಸಲಹೆ ನೀಡಿದರು.
ಸದಾಶಿವಯ್ಯ ವಿಭೂತಿ ಮಾತನಾಡಿ,‘ಸಾವಯವ ಹಾಗೂ ಸಮಗ್ರ ಕೃಷಿ ಮಣ್ಣಿನ ಆರೋಗ್ಯ ಸುಧಾರಿಸಲು ನೆರವಾಗುತ್ತದೆ’ ಎಂದರು.
ಪಿಕೆಪಿಎಸ್ ಅಧ್ಯಕ್ಷ ನಾಗೇಂದ್ರಪ್ಪ ಪಾಟೀಲ, ಕಾಶಯ್ಯ ಸ್ವಾಮಿ, ಪಂಡಿತರಾವ ಪಾಟೀಲ, ಶಾಲಿವಾನ್ ಪಾಟೀಲ, ಶಾಲಿವಾನ್ ಬಿರಾದಾರ, ಗುರುಪಾದ ಶೇರಿಕಾರ ಹಾಗೂ ಪಂಡಿತರಾವ್ ಬಿಚ್ಚಗೊಂಡ ಇದ್ದರು.