ಬೀದರ್: ಇಲ್ಲಿಯ ಜಿಲ್ಲಾ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್ ಕಾರಣ ಜಿಲ್ಲಾ ಯುವ ಜನೋತ್ಸವ ಸರಳವಾಗಿ ನಡೆಯಿತು.
ಪ್ರಾದೇಶಿಕ ಉಡುಗೆ ಸ್ಪರ್ದೆ (ಸಾಂಪ್ರದಾಯಿಕ, ಆಧುನಿಕ), ಸಾಮಾಜಿಕ ಸಂದೇಶ ಸಾರುವ ಬೀದಿ ನಾಟಕ ಸ್ಪರ್ಧೆಯಲ್ಲಿ ಯುವಕರು ಮತ್ತು ಯುವತಿಯರು ಪಾಲ್ಗೊಂಡು ಪ್ರತಿಭೆ ಮೆರೆದರು.
ದೃಶ್ಯ ಕಲೆ, ಅಭಿವ್ಯಕ್ತಿ ಕಲೆ, ಕವನ ಬರವಣಿಗೆ, ಕಾವ್ಯದ ನಿರೂಪಣೆ, ಇಂಗ್ಲಿಷ್, ಹೊಸ ಯುಗದ ಉದ್ಯಮಶೀಲತೆ ಬಗ್ಗೆ ಗುಂಪು ಚರ್ಚೆ ಹಾಗೂ ಯೋಗ ಸ್ಫರ್ಧೆಗಳು ನಡೆದವು. ಗ್ರಾಮೀಣ ಪ್ರದೇಶದ ಅನೇಕ ಯುವತಿ, ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಲಾವಿದ ವಿಜಯಕುಮಾರ ಸೋನಾರೆ, ಎಸ್.ಬಿ.ಕುಚಬಾಳ್, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ, ಚಿತ್ರ ಕಲಾವಿದ ಯೋಗೇಶ ಮಠದ, ಎಸ್.ವಿ.ಕಲ್ಮಠ, ನಿರ್ಣಾಯಕರಾಗಿದ್ದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಿಗೇರ, ದೇವಿದಾಸ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಮಯೂರಕುಮಾರ ಗೋರ್ಮೆ, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಭುಲಿಂಗ ಬಿರಾದಾರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್, ಸುನೀಲ ಭಾವಿಕಟ್ಟಿ ಹಾಗೂ ಮೊಗಲಪ್ಪ ಮಾಳಗೆ ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ನೆಹರೂ ಯುವ ಕೇಂದ್ರ, ಯುವ ಸ್ಪಂದನ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವಕ, ಯುವತಿ ಸಂಘಗಳ ಆಶ್ರಯದಲ್ಲಿ ಯವ ಜನೋತ್ಸವ ಜರುಗಿತು.