ಬೀದರ್: ಪ್ರತಿ ಮನೆಯಲ್ಲೂ ಸೌರ ಶಕ್ತಿ ಘಟಕ ಅಳವಡಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜೂನ್ 4 ರಂದು ‘ಘರ್ ಕೆ ಊಪರ್ ಸೋಲಾರ್ ಈಸ್ ಸೂಪರ್' ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಎನ್ಎಸ್ಇಎಫ್ಐ ಹಾಗೂ ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಸಚಿವಾಲಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಎನ್ಎಸ್ಇಎಫ್ಐನವರು ಸೌರಶಕ್ತಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಿದ್ದಾರೆ ಎಂದು ಹೇಳಿದ್ದಾರೆ.
ಶ್ರೇಣಿ 2 ಮತ್ತು ಶ್ರೇಣಿ 3 ಪಟ್ಟಣ, ನಗರಗಳಲ್ಲಿ ಅಭಿಯಾನ ಮೂಲಕ ಸ್ಥಳೀಯ ಆಡಳಿತ, ಆರ್ಡಬ್ಲ್ಯೂಎ, ಲಯನ್ಸ್, ರೋಟರಿ ಕ್ಲಬ್, ನಾಗರಿಕರಲ್ಲಿ ಜಾಗೃತಿ ಮೂಡಿಸಿ, ಸೌರಶಕ್ತಿ ಬಳಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬರ ಮನೆ ಮೇಲೆ ಸೌರಶಕ್ತಿ ಘಟಕ ಸ್ಥಾಪಿಸಬೇಕು ಎಂದು ಕೋರಿದ್ದಾರೆ.