ಶಿವಮೊಗ್ಗ: ಚುನಾವಣೆ ಈಗ ಮುಗಿದ ಅಧ್ಯಾಯ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಪಕ್ಷಭೇದ ಮರೆತು ಗಮನ ಹರಿಸುತ್ತೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡ ಅಭಿಪ್ರಾಯಪಟ್ಟರು.
ಜಿಲ್ಲೆಯ ಪ್ರಬುದ್ಧ ಜನರು ನಿರೀಕ್ಷೆಗೂ ಮೀರಿ ಬಿಜೆಪಿಗೆ ಮತ ನೀಡಿದ್ದಾರೆ. ಕ್ಷೇತ್ರದಲ್ಲಿ ಹಲವು ಕೆಲಸಗಳು ಬಾಕಿ ಉಳಿದಿವೆ. ನೂತನ ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿಗೆ ಒತ್ತುಕೊಡಲಿದ್ದಾರೆ. ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಹೊಸ ಉದ್ಯೋಗ ಸೃಷ್ಟಿಸಲಾಗುವುದು. ಭದ್ರಾವತಿಯ ಎರಡು ಕಾರ್ಖಾನೆಗಳ ಪುನಃರುಜ್ಜೀವನಕ್ಕೆ ಶ್ರಮಿಸಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಭರವಸೆ ನೀಡಿದರು.
ಜಿಲ್ಲೆಯ ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಸ್ಥಾಪನೆ, ಬಗರ್ಹುಕುಂ ಸಮಸ್ಯೆ, ರೈತರಿಗೆ ನೆರವು ಮೊದಲಾದ ಹಲವು ಯೋಜನೆ ಜಾರಿಗೆ ತರಲಾಗುವುದು. ಸೊರಬ, ಹೊಸನಗರ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗುವುದು. ಸ್ಥಳೀಯ ಸಮಸ್ಯೆಗಳಿಗೆ ನಿವಾರಣೆಗೆ ಸ್ಪಂದಿಸಲಾಗುವುದು. ಶಿವಮೊಗ್ಗ ಸ್ಮಾರ್ಟ್ಸಿಟಿ ಯೋಜನೆಗೆ ವೇಗ ನೀಡಲಾಗುವುದು ಎಂದರು.
ಮೋದಿಯ ಅಲೆ, ಬಿಜೆಪಿಯ ಸಂಘಟಿತ ಪ್ರಯತ್ನ, ದೇಶ ರಕ್ಷಣೆಯ ವಿಚಾರ, ಯುವಕರಿಗೆ ಹೊಸ ಭರವಸೆ ಬಿಜೆಪಿಗೆ ಅನುಕೂಲವಾಯಿತು. ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆ, ಮೈತ್ರಿಕೂಟದ ನಾಯಕರ ಹಗುರ ಮಾತುಗಳು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾದವು ಎಂದು ವಿಶ್ಲೇಷಿಸಿದರು.
ಲೋಕಸಭಾ ಚುನಾವಣೆ ಫಲಿತಾಂಶ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ, ಮುಖಂಡರಾದ ಡಿ.ಎಸ್. ಅರುಣ್, ಅನಿತಾ ರವಿಶಂಕರ್, ಎಸ್. ದತ್ತಾತ್ರಿ, ಬಿಳಕಿ ಕೃಷ್ಣಮೂರ್ತಿ, ಬಿ.ಆರ್.ಮಧುಸೂದನ್, ಕೆ.ಅಣ್ಣಪ್ಪ, ರತ್ನಾಕರ ಶೆಣೈ, ಹಿರಣ್ಣಯ್ಯ ಉಪಸ್ಥಿತರಿದ್ದರು.