ಶಿಕಾರಿಪುರ: ಬಿಜೆಪಿ ಕಾರ್ಯಕರ್ತ ರಾಜು ಅವರ ಮೇಲೆ ಶನಿವಾರ ಹಲ್ಲೆ ನಡೆಸಿರುವ ಕಾಂಗ್ರೆಸ್ ಮುಖಂಡ ಶಾಂತವೀರಪ್ಪಗೌಡ ಅವರ ಸಹೋದರನ ಮಗ ಎಸ್.ಪಿ. ನಾಗರಾಜಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದರು.
‘ಶಾಂತವೀರಪ್ಪಗೌಡ ಅವರ ಸಹೋದರನ ಮಗ ಎಸ್.ಪಿ.ನಾಗರಾಜಗೌಡ ಹಾಗೂ ಅವರ ಸಹೋದರರು ಪೊಲೀಸರ ಎದುರೇ ನಮ್ಮ ಪಕ್ಷದ ಕಾರ್ಯಕರ್ತನನ್ನು ಥಳಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗುರುಮೂರ್ತಿ ದೂರಿದರು.
‘ಪುರಸಭೆ ಚುನಾವಣೆಯಲ್ಲಿ ಸಂಬಂಧಿಕರನ್ನು ತಮ್ಮ ವಿರುದ್ಧ ನಿಲ್ಲಿಸಲು ಯತ್ನಿಸುತ್ತಿದ್ದೀರಾ’ ಎಂದು ಶಾಂತವೀರಪ್ಪಗೌಡ ಅವರು ಶುಕ್ರವಾರ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೊಳಗಿ ರೇವಣಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಧೈರ್ಯವಿದ್ದರೆ ತಮ್ಮ ಮನೆ ಸಮೀಪವಿರುವ ಸರ್ಕಲ್ಗೆ ಬಾ ಎಂದು ಸವಾಲು ಹಾಕಿ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಗುರುಮೂರ್ತಿ ಆರೋಪಿಸಿದರು.
‘ಶಾಂತವೀರಪ್ಪಗೌಡ ಹಾಗೂ ಪುತ್ರ ಎಚ್.ಎಸ್.ರವೀಂದ್ರ ನನ್ನ ಮನೆ ಬಾಗಿಲಿಗೂ ಬಂದು ನನ್ನನ್ನು ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಶಾಂತವೀರಪ್ಪಗೌಡ ಹಾಗೂ ಪುತ್ರ ರವೀಂದ್ರ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.
‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನೋಪಯೋಗಿ ಕೆಲಸ ಮಾಡಿ ಪ್ರಜೆಗಳ ಮನಸ್ಸು ಗೆಲ್ಲಬೇಕು. ಗೂಂಡಾ ವರ್ತನೆಯಿಂದ ಪ್ರಜೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಹಾಗೂ ರಾಘವೇಂದ್ರ ನಿಮ್ಮ ಗ್ರಾಮಕ್ಕೆ ಮತ ಕೇಳಲು ಬಂದರೆ ಕಟ್ಟಿಹಾಕಿ ಹೊಡೆಯಿರಿ ಎಂದು ಶಾಂತವೀರಪ್ಪಗೌಡ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಆದರೆ, ಚುನಾವಣಾ ಆಯೋಗ ಅಥವಾ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಕೊಳಗಿ ರೇವಣಪ್ಪ ತಮಗೆ ಜೀವ ಬೆದರಿಗೆ ಕರೆ ಬಂದ ಬಗ್ಗೆ ವಿವರಿಸಿದರು.
ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶಾಂತವೀರಪ್ಪಗೌಡ ಹಾಗೂ ಕುಟುಂಬದ ಸದಸ್ಯರ ವರ್ತನೆಯನ್ನು ಖಂಡಿಸಿದರು. ನಂತರ ಕೊಳಗಿ ರೇವಣಪ್ಪ ಅವರನ್ನು ಶಾಂತವೀರಪ್ಪಗೌಡ್ರ ನಿವಾಸ ಸಮೀಪದ ಸರ್ಕಲ್ಗೆ ಕರೆದುಕೊಂಡು ಹೋದರು. ಬಳಿಕ ಪೊಲೀಸ್ ಠಾಣೆಗೆ ಬಂದು ಧರಣಿ ಕುಳಿತರು.
ಮುಖಂಡರಾದ ಕೆ. ಶೇಖರಪ್ಪ, ಕೆ. ಹಾಲಪ್ಪ, ಅಗಡಿ ಅಶೋಕ್, ಕಬಾಡಿ ರಾಜಪ್ಪ, ಎಂ.ಬಿ. ಚನ್ನವೀರಪ್ಪ, ತೊಗರ್ಸಿ ಹನುಮಂತಪ್ಪ, ಜೆ. ಸುಕೇಂದ್ರಪ್ಪ, ವಸಂತಗೌಡ್ರು, ಕುಮಾರಗೌಡ್ರು, ದೂದಿಹಳ್ಳಿ ಬಸವರಾಜ್, ಗುರುಜಗತಾಪ್, ಡಿ.ಎಸ್. ಈಶ್ವರಪ್ಪ, ಹಳ್ಳೆಣ್ಣೆ ಹುಚ್ಚರಾಯ, ಹಳ್ಳೂರು ಪರಮೇಶ್ವರಪ್ಪ, ಅಣ್ಣಪ್ಪಗೌಡ್ರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.