ಮಸ್ಕಿ: ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ರಾತ್ರಿ ಸಿಡಿಮದ್ದು ಸ್ಫೋಟಗೊಂಡು ನಾಲ್ವರಿಗೆ ಗಾಯಗಳಾಗಿದ್ದು, ನಾಲ್ಕು ವಾಹನಗಳ ಗಾಜು ಒಡೆದಿದೆ.
ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆ ಆವರಣಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಗುತ್ತಿಗೆದಾರರು ಕಟ್ಟಡದ ತಳಪಾಯದಲ್ಲಿ ಇದ್ದ ಕಲ್ಲು ಒಡೆಯಲು ಸಿಡಿಮದ್ದು ಬಳಕೆ ಮಾಡಿದ್ದಾರೆ.
ಸ್ಫೋಟದಿಂದಾಗಿ ಹಳೆಯ ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಬಳಿಕ ಸಿಡಿ ಮದ್ದು ಸ್ಫೋಟಿಸಿದವರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಗುರುಪಾದೇಶ್ವರ ಪಾಟೀಲ, ಸರ್ಕಲ್ ಇನ್ಸ್ಪೆಕ್ಟರ್ ಚೆನ್ನಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಸಿಡಿ ಮದ್ದು ಬಳಕೆಗೆ ಗುತ್ತಿಗೆದಾರರು ಅನುಮತಿ ಪಡೆಯಬೇಕು. ಆದರೆ, ಗುತ್ತಿಗೆದಾರರು ಅನುಮತಿ ಪಡೆದುಕೊಂಡಿಲ್ಲ ಎಂದು ಗುರುಪಾದೇಶ್ವರ ತಿಳಿಸಿದ್ದಾರೆ.