ವಿಜಯಪುರ:ಬಿಜೆಪಿಯ ವಿಜಯಪುರ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ (ಜೂನ್ 29) ತಮ್ಮ ಜನ್ಮದಿನದಂದು ತಲವಾರ್ನಿಂದ ಕೇಕ್ ಕತ್ತರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವರುದ್ರ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಲ ಫೋಟೋಗಳ ಜತೆ ಈ ಫೋಟೋವನ್ನು ಸಹ ಅಪ್ಲೋಡ್ ಮಾಡಿಕೊಂಡಿದ್ದರು. ಪರಿಚಯಸ್ಥರೇ ಇದನ್ನು ವೈರಲ್ ಮಾಡಿದ್ದಾರೆ ಎನ್ನಲಾಗಿದೆ.ತಲವಾರ್ನಿಂದ ಕೇಕ್ ಕತ್ತರಿಸಿರುವುದಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆ ನಡೆದಿದ್ದು, ಟೀಕೆ–ಪ್ರತಿ ಟೀಕೆಗಳು ವ್ಯಕ್ತವಾಗಿವೆ.
‘ಜನ್ಮದಿನದಂದು ನಗರದ 20ಕ್ಕೂ ಹೆಚ್ಚು ಕಡೆ ಅಪಾರ ಸಂಖ್ಯೆಯ ಜನರ ಮುಂಭಾಗ ಕೇಕ್ ಕತ್ತರಿಸಿದ್ದೆ. ಓಣಿಯೊಂದರಲ್ಲಿ ಅಭಿಮಾನಿಗಳು ನನ್ನ ಕೈಗೆ ತಲವಾರ್ ಕೊಟ್ಟು ಕೇಕ್ ಕತ್ತರಿಸುವಂತೆ ಒತ್ತಾಯಿಸಿದರು. ಅವರ ಆಗ್ರಹಕ್ಕೆ ಮಣಿದು ಕೇಕ್ ಕತ್ತರಿಸಿದ್ದೇ’ ಎಂದು ಶಿವರುದ್ರ ಬಾಗಲಕೋಟ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.