ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್–19 ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟ ಸೋಂಕಿತರ ಸಂಖ್ಯೆ 61ಕ್ಕೆ ಏರಿದೆ. ಸೋಂಕಿನ ಕಾರಣದಿಂದ ನಿಧನರಾದವರ ಸಂಖ್ಯೆ 43ಕ್ಕೆ ಏರಿದೆ. ಸೋಂಕು ಇದ್ದರೂ ಇತರ ಅನಾರೋಗ್ಯಗಳಿಂದಾಗಿ 18 ಮಂದಿ ಸಾವಿಗೀಡಾಗಿದ್ದಾರೆ.
ಕೊಳ್ಳೇಗಾಲ ನಗರದ ನಿವಾಸಿ 79 ವರ್ಷದ ವೃದ್ಧ (ರೋಗಿ ಸಂಖ್ಯೆ 4,42,767) ಅವರು ಸೆ.9ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ತಡ ರಾತ್ರಿ 2 ಗಂಟೆಗೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಹೊಸ 44 ಕೋವಿಡ್–19 ಪ್ರರಕಣಗಳು ವರದಿಯಾಗಿವೆ. 17 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 2,879ಕ್ಕೆ ಹಿಗ್ಗಿದೆ. 2,268 ಮಂದಿ ಗುಣಮುಖರಾಗಿದ್ದಾರೆ. 551 ಸಕ್ರಿಯ ಪ್ರಕರಣಗಳಿವೆ. 162 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. 32 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಒಂದೇ ದಿನ 924 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್ಟಿಪಿಸಿಆರ್ 520, ರ್ಯಾಪಿಡ್ ಆ್ಯಂಟಿಜೆನ್ 359, ಟ್ರು ನಾಟ್ 45 ಪರೀಕ್ಷೆಗಳನ್ನು ಮಾಡಲಾಗಿದೆ. 883 ವರದಿಗಳು ನೆಗೆಟಿವ್ ಬಂದು 41 ವರದಿಗಳು ಪಾಸಿಟಿವ್ ಬಂದಿವೆ. ಮೂರು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ.
50 ಸಾವಿರದ ಸನಿಹಕ್ಕೆ ಪರೀಕ್ಷೆ
ಈ ಮಧ್ಯೆ, ಜಿಲ್ಲೆಯಲ್ಲಿ ಈವರೆಗೆ ನಡೆಸಲಾದ ಕೋವಿಡ್ ಪರೀಕ್ಷೆಗಳ ಸಂಖ್ಯೆ 50 ಸಾವಿರದ ಸಮೀಪಕ್ಕೆ ತಲುಪಿದೆ. ಇಲ್ಲಿವರೆಗೆ 49,805 ಪರೀಕ್ಷೆಗಳನ್ನು ನಡೆಸಲಾಗಿದ್ದು, 46,946 ಮಂದಿಯ ವರದಿಗಳು ನೆಗೆಟಿವ್ ಬಂದಿವೆ.
ಹೊಸ 44 ಸೋಂಕಿತರಲ್ಲಿ ಕೊಳ್ಳೇಗಾಲ ತಾಲ್ಲೂಕಿನ 16, ಗುಂಡ್ಲುಪೇಟೆಯ 14, ಚಾಮರಾಜನಗರದ 12, ಯಳಂದೂರು ತಾಲ್ಲೂಕಿನ ಇಬ್ಬರು ಇದ್ದಾರೆ.ಸೋಂಕು ಮುಕ್ತರಾದ 17 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ ಏಳು, ಗುಂಡ್ಲುಪೇಟೆಯ ಐವರು, ಕೊಳ್ಳೇಗಾಲದ ನಾಲ್ವರು ಹಾಗೂ ಯಳಂದೂರಿನ ಒಬ್ಬರು ಇದ್ದಾರೆ.