ಕೊಳ್ಳೇಗಾಲ: ಆಧಾರ್ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿಗಾಗಿ ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿತ್ಯ ಆಧಾರ್ ಕೇಂದ್ರಗಳ ಮಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇಲ್ಲಿದೆ.
ತಹಶೀಲ್ದಾರ್ ಕಚೇರಿಯಲ್ಲಿ, ನಗರದ ಕೆನರಾ ಬ್ಯಾಂಕ್, ಕೋಟ್ಯಾಕ್ ಮಹೇಂದ್ರ ಬ್ಯಾಂಕ್, ಎಸ್ಬಿಐ ಬ್ಯಾಂಕ್ ಮುಂದೆ ಜನರ ಸಾಲು ನಿತ್ಯ ಕಂಡುಬರುತ್ತಿದೆ. ಈ ಎಲ್ಲ ಆಧಾರ್ ಕೇಂದ್ರಗಳಲ್ಲಿ ದಿನಕ್ಕೆ 30 ಜನರಿಗಷ್ಟೇ ಆಧಾರ್ ಸಂಬಂಧಿತ ಕೆಲಸ ಮಾಡಿಕೊಡಬಹುದಾಗಿದೆ. ಆದರೆ, ಪ್ರತಿದಿನ ಗ್ರಾಮೀಣ ಪ್ರದೇಶಗಳಿಂದ ಜನರು ಹೆಚ್ಚಾಗಿ ಬರುತ್ತಿರುವ ಕಾರಣ ದಟ್ಟಣೆ ಸಮಸ್ಯೆ ಎದುರಾಗಿದೆ.
ನಸುಕಿನ ಜಾವ 5 ಗಂಟೆಗೆ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು, ಹಿರಿಯರು ಆಧಾರ್ಕಾರ್ಡ್ ಟೋಕನ್ ಪಡೆಯಲು ಕಾಯುತ್ತಿರುತ್ತಾರೆ. ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನೂ ಹಲವರು ಜತೆಯಲ್ಲೇ ತೆಗೆದುಕೊಂಡು ಬಂದು ಸರದಿಯಲ್ಲಿ ಕಾಯುತ್ತಿದ್ದಾರೆ.
ಸ್ಥಳೀಯ ಆಡಳಿತ ಇನ್ನಷ್ಟು ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಬೇಕು ಎಂಬುದು ಜನರ ಆಗ್ರಹವಾಗಿದೆ. ಕೆಲವು ಬ್ಯಾಂಕ್ಗಳ ಮುಂದೆ ಆಧಾರ್ ಕಾರ್ಡ್ ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ರಸ್ತೆಗೆ ಬಂದು ನಿಲ್ಲುತ್ತಿದ್ದಾರೆ. ಇದರಿಂದ ಅನಾಹುತಗಳು ಸಹ ಈಗಾಗಲೇ ಸಂಭವಿಸಿದೆ. ಬ್ಯಾಂಕ್ ಹಾಗೂ ಆಧಾರ್ ಕೇಂದ್ರದವರು ಸಾಲು ನಿಂತ ಜನರ ಸುರಕ್ಷತೆ ಬಗ್ಗೆ ಜವಾಬ್ದಾರಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.