ಚಾಮರಾಜನಗರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅಬ್ರಾರ್ ಅಹಮದ್ ಅವರು ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಸೈಯದ್ ಆರೀಫ್ ಸಿ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಎಂ, ಕಾರ್ಯದರ್ಶಿಗಳಾಗಿ ಜಬೀ ನೂರ್, ರಾಜ್ ಗೋಪಾಲ್ ಹಾಗೂ ಖಜಾಂಚಿಯಾಗಿ ಸೈಯದ್ ಇರ್ಫಾನ್ ಅವರು ಆಯ್ಕೆಯಾದರು.
ಶಿವಣ್ಣ, ಜಾಕಿರ್ ಆಹಮದ್, ನಯಾಜ್ ಉಲ್ಲಾ, ಅಜೀಮ್ ಷರೀಫ್, ರಫೀಕ್ ಉಲ್ಲಾ ಖಾನ್, ಜಬೀ ಉಲ್ಲಾ, ಅಫ್ಸರ್ ಪಾಷ ಅವರುಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2021ರಿಂದ 2024ರ ಅವಧಿಗಾಗಿ ಈ ಆಯ್ಕೆ ನಡೆದಿದೆ.
ಎಸ್ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹೀದ್ ಪಾಷ ಅವರ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಪ್ರತಿನಿಧಿ ಕೌನ್ಸಿಲ್ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಘಟಕದ ನಿರ್ಗಮಿತ ಅಧ್ಯಕ್ಷ ಕಲೀಲ್ ಉಲ್ಲಾ ಅವರು, ‘ಒಂದೂವರೆ ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಲಾಕ್ಡೌನ್ ಅವಧಿಯೇ ಹೆಚ್ಚು ಇದ್ದುದರಿಂದ ಪಕ್ಷದ ಬೆಳವಣಿಗೆಗೆ ಕೊಂಚ ಹಿನ್ನಡೆ ಆಯಿತು. ಆದರೂ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಆಮ್ಲಜನಕ ದುರಂತದ ಸಂದರ್ಭದಲ್ಲಿ ನಾವು ನಡೆಸಿರುವ ಹೋರಾಟ ಮಹತ್ವದ್ದು’ ಎಂದರು.
ನೂತನ ಅಧ್ಯಕ್ಷ ಅಬ್ರಾರ್ ಅಹಮದ್ ಅವರು ಮಾತನಾಡಿ, ‘ಜನಪರ ಹೋರಾಟಗಳು, ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರಗಳು, ಚುನಾಯಿತ ಜನಪ್ರತಿನಿಧಿ ಸಹ ಆಗಿರುವುದರಿಂದ ವಾರ್ಡಿನ ಕೆಲಸ ಕಾರ್ಯಗಳು ಹೀಗೆ ವಿವಿಧ ಕೆಲಸ ಕಾರ್ಯಗಳು ಮಾಡುವ ಸವಾಲು ನನ್ನ ಮುಂದಿದೆ. ಪ್ರಾಮಾಣಿಕತೆಯಿಂದ ನನ್ನ ಕೆಲಸ ನಿರ್ವಹಿಸುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಕಾರ್ಯಕರ್ತರ ಹಾಗೂ ಜಿಲ್ಲಾ ಸಮಿತಿ ಸದಸ್ಯರ ಸಹಕಾರ ಬೇಕು’ ಎಂದರು.
‘ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಮೊದಲ ಆದ್ಯತೆ ಆಗಿರಬೇಕು’ ಎಂದು ಅವರು ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ನಾಯಕತ್ವದ ಗುಣಗಳು ಮತ್ತು ಅದರ ಪ್ರಾಮುಖ್ಯದ ಕುರಿತು ರಾಜ್ಯ ಸಮಿತಿ ಸದಸ್ಯ, ಹೈಕೋರ್ಟ್ ವಕೀಲ ವಸೀಮ್ ಅಹಮದ್ ಅವರು ಉಪನ್ಯಾಸ ನೀಡಿದರು.