ಹನೂರು: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಗೆ ದೇವರಾಜ್ ನಾಯ್ಡು ಅವರ ಜಮೀನಿನಲ್ಲಿ ಬೆಳೆದಿದ್ದ 3 ಎಕರೆ ಪಚ್ಚಬಾಳೆ ನೆಲಕಚ್ಚಿದೆ.
ಪಟ್ಟಣದ ಹುಲ್ಲೇಪುರ ಪ್ರದೇಶದ ಜಮೀನಿನಲ್ಲಿ ಪಚ್ಚ ಬಾಳೆ ಬೆಳೆದಿದ್ದರು. ಬಾಳೆ ಗೊನೆ ಬಿಟ್ಟಿದ್ದು ಕಟಾವು ಹಂತಕ್ಕೆ ಬಂದಿತ್ತು. ಆದರೆ ಬಿರುಗಾಳಿ ಸಹಿತ ಮಳೆಗೆ ಫಸಲೆಲ್ಲಾ ಸಂಪೂರ್ಣವಾಗಿ ನೆಲಕಚ್ಚಿದೆ.
‘ವರ್ಷದಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಫಸಲು ಈಗ ಹಾಳಾಗಿದೆ. ಇಳುವರಿ ಉತ್ತಮವಾಗಿ ಬಂದಿತ್ತು ಆದರೆ ಮಳೆಯಿಂದಾಗಿ ಅಂದಾಜು ಒಂದು ಲಕ್ಷ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಕೊಡಿಸಿಕೊಡಬೇಕು’ ಎಂದು ರೈತ ದೇವರಾಜ್ ನಾಯ್ಡು ಒತ್ತಾಯಿಸಿದ್ದಾರೆ.
ಬುಧವಾರ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ ಭೇಟಿ ನೀಡಿ ಪರಿಶೀಲಿಸಿ, ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.