ಚಾಮರಾಜನಗರ: ತಾಲ್ಲೂಕಿನಲ್ಲಿ ಶನಿವಾರ- ಭಾನುವಾರ ಸುರಿದ ಗಾಳಿ ಸಹಿತ ಬಿರುಸಿನ ಮನೆಗೆ ವಿವಿಧ ಕಡೆಗಳಲ್ಲಿ ಕಟಾವಿನ ಹಂತಕ್ಕೆ ಬಂದಿದ್ದ ಬಾಳೆ ಫಸಲು ನೆಲಕ್ಕಚ್ಚಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಬೆಂಡರವಾಡಿ - ಮೇಗಲಹುಂಡಿ ವ್ಯಾಪ್ತಿಯಲ್ಲಿ ಹತ್ತಾರು ಎಕರೆಯಲ್ಲಿ ಬಾಳೆ ನಾಶವಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಭಾರಿ ನಷ್ಟವಾಗುವ ಭೀತಿಯಲ್ಲಿದ್ದಾರೆ.
ಬೆಳೆಹಾನಿ ಪರಿಶೀಲನೆ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸೋಮವಾರ ತಾಲ್ಲೂಕಿನ ಬೆಂಡರವಾಡಿ- ಮೇಗಲಹುಂಡಿಯಲ್ಲಿ ಬಾಳೆ ಬೆಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈತರಿಂದ ಮಾಹಿತಿ ಪಡೆದ ಅವರು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು.
ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರು ಈ ಸಂದರ್ಭದಲ್ಲಿ ಇದ್ದರು.
ಫಸಲು ಕಳೆದುಕೊಂಡ ರೈತರಿಗೆ ಪ್ರಕೃತಿ ವಿಕೋಪ ಯೋಜನೆಯ ಅಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಪುಟ್ಟರಂಗಶೆಟ್ಟಿ ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಮುತ್ತಿಗೆ ಮತ್ತು ಪಣ್ಯದಹುಂಡಿ ಗ್ರಾಮದಲ್ಲಿ ಮಳೆಯಿಂದ ಕುಸಿತಗೊಂಡ ಮನೆಗಳನ್ನೂ ಪರಿಶೀಲಿಸಿದ ಶಾಸಕರು, ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸುವ ಭರವಸೆಯನ್ನು ನೀಡಿದರು.