ಗುಂಡ್ಲುಪೇಟೆ: ಮಹಾಶಿವರಾತ್ರಿ ದಿನವಾದ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಸತತ ಮೂರು ದಿನ ಸಾಲು ರಜೆ ಇದ್ದುದರಿಂದತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದು ಸಫಾರಿ ಕೌಂಟರ್ ತುಂಬಿ ತುಳುಕಿತು.
ಶನಿವಾರ ಬಂಡೀಪುರ ವ್ಯಾಪ್ತಿಯ ತಾವರೆಕಟ್ಟೆಯಲ್ಲಿ ಮಹದೇಶ್ವರ ಜಾತ್ರೆ ಇದ್ದುದ್ದರಿಂದ ಪ್ರವಾಸಿಗರಿಗೆ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಮಾಡಿಸಿ ದೇವರ ದರ್ಶನ ಮಾಡಿದರು. ಬಳಿಕ ಎಲ್ಲರೂ ಸಫಾರಿಗೆ ತೆರಳಿದರು.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಸಫಾರಿ ಕೌಂಟರ್ನಲ್ಲಿ ಸರತಿ ಸಾಲು ಕಂಡು ಬಂತು.ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಡಿಮೆಯಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಬೇಕಾಯಿತು.
ಶನಿವಾರ ಜಾತ್ರೆಯ ಸಲುವಾಗಿ ಸಫಾರಿಗೆ ಹೋಗುವ ವಾಹನಗಳು ಭಕ್ತರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿಬರುತ್ತಿದ್ದುದರಿಂದ ಸಫಾರಿಗೆ ತೆರಳಲು ಕೊಂಚ ತಡವಾಗಿತ್ತು. ಭಾನುವಾರ ಎಂದಿನಂತೆ 8 ಮಿನಿಬಸ್ ಮತ್ತು 5 ಜಿಪ್ಸಿಗಳು ಸಫಾರಿ ತೆರಳಿದವು. ಹೆಚ್ಚಾಗಿ ಟ್ರಿಪ್ ವ್ಯವಸ್ಥೆ ಮಾಡಿದರೂ ಕೆಲವರಿಗೆ ಸಫಾರಿಗೆ ತೆರಳಲು ಟಿಕೆಟ್ ಸಿಗಲಿಲ್ಲ.
‘ಮಧ್ಯಾಹ್ನ 3ಕ್ಕೆ ಆರಂಭವಾಗುವ ಸಫಾರಿಗೆ ಟಿಕೆಟ್ ತೆಗೆದುಕೊಳ್ಳುವ ಸಲುವಾಗಿ 1 ಗಂಟೆಗೆ ಸಾಲಿನಲ್ಲಿ ನಿಲ್ಲುತ್ತಿದ್ದರು. ನಿರೀಕ್ಷೆಗೆ ಮೀರಿ ಜನರು ಬಂದಿದ್ದಾರೆ. ಸಾಲು ರಜೆ ಇರುವ ಕಾರಣ ಆದಾಯವು ಹೆಚ್ಚಾಗುತ್ತದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
‘ಮೂರು ದಿನಗಳಿಂದ ಐದು ಸಾವಿರಕ್ಕೂ ಹೆಚ್ಚು ಜನರು ಸಫಾರಿಗೆ ಬಂದಿದ್ದಾರೆ. ಸೋಮವಾರದಿಂದ ಜನರು ಕಡಿಮೆ ಆಗುತ್ತಾರೆ. ಮತ್ತೆ ಬೇಸಿಗೆ ರಜೆಯಲ್ಲಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.