ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ 16ಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿರುವ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಸೋಮವಾರ ಆರಂಭವಾಯಿತು. ಮಂಗಳವಾರದಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಯಲಿದೆ.
ಮಧ್ಯಾಹ್ನ ಮೂರು ಗಂಟೆಗೆ ನಾಗರಹೊಳೆಯಿಂದ ಜಯಪ್ರಕಾಶ, ಪಾರ್ಥಸಾರಥಿ, ಗಣೇಶ, ರೋಹಿತ ಎಂಬ ಹೆಸರಿನ ಸಾಕಾನೆಗಳು ಬಂದಿದ್ದು, ವಿರಾಜಪೇಟೆಯಿಂದ ವೈದ್ಯರು ಹಾಗೂ ಅರಿವಳಿಕೆ ತಜ್ಞರನ್ನು ಕರೆಸಲಾಗಿದೆ.
ಸಂಜೆಯ ಹೊತ್ತಿಗೆ ಚಿರಕನಹಳ್ಳಿ ಬೇಸ್ ಕ್ಯಾಂಪ್ ಬಳಿ ವೈದ್ಯರು ಹುಲಿಯತ್ತ ಅರಿವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿದ್ದಾರೆ. ಆದರೆ, ಅದು ಹುಲಿಗೆ ತಗುಲಿಲ್ಲ. ಕತ್ತಲಾಗುತ್ತಿದ್ದಂತೆಯೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
‘ಆನೆಗಳು ಹಾಗೂ ತಜ್ಞರು ಸೋಮವಾರ ಬರುವಾಗ ತಡವಾಗಿತ್ತು. ಹಾಗಾಗಿ, ಮಧ್ಯಾಹ್ನದ ಮೇಲೆ ಕಾರ್ಯಾಚರಣೆ ಆರಂಭಿಸಿದ್ದೆವು. ಹುಲಿಯತ್ತ ಅರಿವಳಿಕೆ ಚುಚ್ಚುಮದ್ದು ಶೂಟ್ ಮಾಡಿರುವುದು ನಿಜ. ಆದರೆ, ಅದು ಹುಲಿಗೆ ತಾಗಿಲ್ಲ’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.