ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

262 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಘೋಷಣೆ

ಬಿಆರ್‌ಟಿ: 19ರಂದು ಕೇಂದ್ರದಿಂದ ಅಧಿಸೂಚನೆ, 49 ಗ್ರಾಮಗಳು ಸೂಕ್ಷ್ಮ ವಲಯಕ್ಕೆ, ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ
Last Updated 25 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ (ಬಿಆರ್‌ಟಿ) ವ್ಯಾಪ್ತಿಯ ಸುತ್ತಲೂ 0.5 ಕಿ.ಮೀನಿಂದ 6 ಕಿ.ಮೀವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಯಳಂದೂರು, ಕೊಳ್ಳೇಗಾಲ ಮತ್ತು ಚಾಮರಾಜನಗರ ತಾಲ್ಲೂಕಿನ 49 ಗ್ರಾಮಗಳು ಸೇರಿದಂತೆ ಒಟ್ಟು 262.43 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶ ಪರಿಸರ ಸೂಕ್ಷ್ಮ ವಲಯ ಪ್ರದೇಶದಲ್ಲಿ ಬರುತ್ತದೆ. ಐದು ಗ್ರಾಮಗಳನ್ನು ಬಿಟ್ಟರೆ ಉಳಿದ ಎಲ್ಲ ಗ್ರಾಮಗಳು ಸೂಕ್ಷ್ಮ ವಲಯದಲ್ಲೇ ಬರುತ್ತವೆ.

ಇದೇ 19ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಇದರಿಂದಾಗಿಈ ಪ್ರದೇಶದಲ್ಲಿ 25ಕ್ಕೂ ಹೆಚ್ಚು ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಯಾವುದೇ ಚಟುವಟಿಗಳನ್ನು ಇನ್ನು ನಡೆಸುವಂತಿಲ್ಲ.

ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಪರಿಸರ ತಂತ್ರಜ್ಞಾನ ಅಳವಡಿಕೆ, ಹಸಿರು ಸಾರಿಗೆ, ಗುಡಿ ಕೈಗಾರಿಗಳು ಸೇರಿದಂತೆಪರಿಸರಸ್ನೇಹಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಮಾಸ್ಟರ್‌ ಪ್ಲಾನ್‌ಗೆ ಸೂಚನೆ: ಪರಿಸರ ಸೂಕ್ಷ್ಮವಲಯಕ್ಕಾಗಿ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಇನ್ನು ಎರಡು ವರ್ಷಗಳಲ್ಲಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಮೇಲ್ವಿಚಾರಣಾ ಸಮಿತಿ: ಘೋಷಿತ ವಲಯದ ಸಂರಕ್ಷಣೆಗಾಗಿ ಮೈಸೂರು ವಿಭಾಗದ ಆಯುಕ್ತರ ನೇತೃತ್ವದಲ್ಲಿ 13 ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನೂ ಕೇಂದ್ರ ಸರ್ಕಾರ ರಚಿಸಿದೆ.

ತೊಂದರೆ ಇಲ್ಲ: ‘ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ರೈತರು ನಡೆಸುತ್ತಿರುವ ಕೃಷಿ ಚಟುವಟಿಕೆ, ಡೇರಿ ಸೇರಿದಂತೆ ವ್ಯವಸಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಮೇಲ್ವಿಚಾರಣಾ ಸಮಿತಿಯು ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ’ ಎಂದು ಬಿಆರ್‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌ ‘ಪ್ರಜಾವಾಣಿ’ಗೆ ತಳಿಸಿದರು.

ಅಪರೂಪದ ವನ್ಯಜೀವಿಗಳ ಆವಾಸ:574.82 ಚದರ ಕಿ.ಮೀ ವ್ಯಾಪ್ತಿಯ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ರಕ್ಷಿತಾರಣ್ಯವನ್ನು 2011ರ ಜನವರಿ 24ರಂದು ‘ಹುಲಿ ಸಂರಕ್ಷಿತ ಪ‍್ರದೇಶ’ ಎಂದು ಘೋಷಿಸಲಾಗಿತ್ತು. ಅಪ‍ರೂಪದ ಪ್ರಾಣಿ ಹಾಗೂ ಸಸ್ಯ ಸಂಕುಲಗಳಿಗೆ ಆಶ್ರಯ ನೀಡಿರುವ ಬಿಆರ್‌ಟಿಯಲ್ಲಿ 35ರಿಂದ 50 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.

28 ಪ್ರಭೇದದ ಸಸ್ತನಿಗಳು, 274 ಬಗೆಯ ಹಕ್ಕಿಗಳು, 14 ಪ್ರಭೇದಗಳ ಉಭಯಚರಗಳು, 23 ಜಾತಿಯ ಸರೀಸೃಪಗಳು, 1,350 ಬಗೆಯ ಗಿಡಮರಗಳು, 145 ಬಗೆಯ ಚಿಟ್ಟೆಗಳು, 886 ಗಿಡಮೂಲಿಕೆಗಳು ಹಾಗೂ 25 ಆರ್ಕಿಡ್‌ ಪ್ರಭೇದಗಳು ಇಲ್ಲಿವೆ.

ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳು

ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಎಮ್ಮೆಹಟ್ಟಿ, ಹೊನ್ನಮೆಟ್ಟಿ, ಬೇಡಗುಳಿ, ಚಿಕ್ಕಮುದ್ದಹಳ್ಳಿ, ದೊಡ್ಡಮುದ್ದಹಳ್ಳಿ, ಪುಣಜನೂರು, ಪುಣಜನೂರು ರಾಜ್ಯ ಅರಣ್ಯ, ಹೊನ್ನೇಗೌಡನಗುಂಡಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಅಟ್ಟುಗೂಳಿಪುರ, ಹೊಂಗಲವಾಡಿ, ಕುಂಬೇಶ್ವರ ಕಾಲೊನಿ, ಅಯ್ಯನಪುರ, ಮಲ್ಲದೇವನಹಳ್ಳಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಹೊಂಡರಬಾಳು, ಜ್ಯೋತಿಗೌಡನಪುರ (1 ಕಿ.ಮೀ ವ್ಯಾಪ್ತಿ), ಮೇಲುಮಾಳ, ತಿಮ್ಮೇಗೌಡನಪಾಳ್ಯ, ಯರಗಂಬಳ್ಳಿ (1ಕಿ.ಮೀ ವ್ಯಾಪ್ತಿ), ಗುಂಬಳ್ಳಿ (1 ಕಿ.ಮೀ ವ್ಯಾಪ್ತಿ), ವಡ್ಡಗೆರೆ, ಗೌಡಹಳ್ಳಿ, ಆಲ್ಕೆರೆ ಅಗ್ರಹಾರ, ಜೋಡಿಮೇಲ್ಲಹಳ್ಳಿ, ಮಲಾರಪಾಳ್ಯ, ದೇವರಹಳ್ಳಿ, ಶಿವಕಹಳ್ಳಿ, ಅರೆಪಾಳ್ಯ, ಸೂರಾಪುರ, ಜಕ್ಕಳ್ಳಿ ದೊಡ್ಡಿ, ತಿಮ್ಮರಾಜಿಪುರ, ಹೊಂಡರಬಾಳು, ಮಧುವನಹಳ್ಳಿ, ಹರುವನಪುರ, ಲಕ್ಷ್ಮಿಪುರ, ಹೊನ್ನ ಬೀರಬೆಟ್ಟ, ಚೆನ್ನಲಿಂಗನಹಳ್ಳಿ, ಚಿಕ್ಕ ಮಾಲಾಪುರ, ಸೀರಗೋಡು, ಲಕ್ಕನಹಳ್ಳಿ, ಮಾವತ್ತೂರು, ಗುಂಡಿಮಾಳ, ಅರಬಿಕೆರೆ, ಪರಸೆಗೌಡನಪಾಳ್ಯ, ಉತ್ತೂರು ಮತ್ತು ಬೈಲೂರು

ಯಾವೆಲ್ಲ ಚಟುವಟಿಕೆಗಳಿಗೆ ನಿಷೇಧ?

* ವಾಣಿಜ್ಯ ಗಣಿಗಾರಿಕೆ, ಕಲ್ಲು ಕ್ವಾರಿ ಹಾಗೂ ಕ್ರಶಿಂಗ್‌ ಘಟಕಗಳು

* ನೀರು, ಗಾಳಿ, ಮಣ್ಣು ಹಾಗೂ ಶಬ್ದಮಾಲಿನ್ಯ ಉಂಟುಮಾಡುವ ಉದ್ಯಮಗಳ ಸ್ಥಾಪನೆ

* ದೊಡ್ಡ ಜಲವಿದ್ಯುತ್‌ ಘಟಕಗಳು

* ಹಾನಿಕಾರಕ ವಸ್ತುಗಳ ಬಳಕೆ ಅಥವಾ ಉತ್ಪಾದನೆ

* ಸಂಸ್ಕರಿಸಿದ ನೀರನ್ನು ನೈಸರ್ಗಿಕ ನೀರಿನ ಮೂಲಗಳಿಗೆ ಹರಿಬಿಡುವುದು

* ಕಂಪನಿಗಳ ದೊಡ್ಡಮಟ್ಟದ ವಾಣಿಜ್ಯ ಉದ್ದೇಶದ ಕೋಳಿ ಹಾಗೂ ದನಕರುಗಳ ಫಾರ್ಮ್‌ಗಳು

* ಮರದ ಮಿಲ್‌ಗಳು, ಇಟ್ಟಿಗೆ ಗೂಡುಗಳು

* ಉರುವಲು ಕಟ್ಟಿಗೆಯ ವಾಣಿಜ್ಯ ಉದ್ದೇಶದ ಬಳಕೆ

ಯಾವುದಕ್ಕೆಲ್ಲ ನಿಯಂತ್ರಣ? (ಅನುಮತಿ ಕಡ್ಡಾಯ)

* ಪರಿಸರಸ್ನೇಹಿ ಪ್ರವಾಸೋದ್ಯಮ ಉದ್ದೇಶಕ್ಕೆ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಡೇರೆಗಳು

* ಮಾಲಿನ್ಯರಹಿತ ಸಣ್ಣ ಪ್ರಮಾಣದ ಉದ್ಯಮಗಳು

* ಮರಗಳ ತೆರವು

* ವಿದ್ಯುತ್‌, ದೂರವಾಣಿ ಹಾಗೂ ಇತರೆ ಸಂಪರ್ಕ ಮಾಧ್ಯಮಗಳ ಕಂಬಗಳ ಅಳವಡಿಕೆ

* ರಸ್ತೆ ವಿಸ್ತರಣೆ ಹಾಗೂ ಹೊಸ ರಸ್ತೆಗಳ ನಿರ್ಮಾಣ

* ರಾತ್ರಿ ರಸ್ತೆ ಸಂಚಾರ

* ಸಂಸ್ಕರಿಸಿದ ನೀರನ್ನು ನೈಸರ್ಗಿಕ ಭೂಪ್ರದೇಶಗಳಿಗೆ ಬಿಡುವುದು

* ಪಾಲಿಥೀನ್‌ ಬ್ಯಾಗ್‌ ಬಳಕೆ

* ವಾಣಿಜ್ಯ ಫಲಕಗಳ ಅಳವಡಿಕೆ

ಘೋಷಿಸಲಾದ ಪ್ರದೇಶದಲ್ಲಿ ಯಾವ ಚಟುವಟಿಕೆಗಳನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂಬುದು ಸ್ಪಷ್ಟವಾಗಿದೆ. ನಾವು ಅದನ್ನು ಅನುಸರಿಸಬೇಕಷ್ಟೆ ಎಂದುಬಿಆರ್‌ಟಿ ಸಿಸಿಎಫ್‌ಡಾ.ಪಿ.ಶಂಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT