ಚಾಮರಾಜನಗರ: ತಾಲ್ಲೂಕಿನ ರೈತರೊಬ್ಬರು ಗುರುವಾರ ರಾತ್ರಿ ಬೆಂಡರವಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಬಾಧೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಚಂದಕವಾಡಿಯ ನಿವಾಸಿ ಸಿದ್ಧಲಿಂಗಸ್ವಾಮಿ (55) ಆತ್ಮಹತ್ಯೆ ಮಾಡಿಕೊಂಡವರು. ಬ್ಯಾಂಕು ಹಾಗೂ ಹಲವು ಕಡೆಗಳಲ್ಲಿ ಅವರು ಕೈ ಸಾಲ ಮಾಡಿದ್ದರು ಎಂದು ಗೊತ್ತಾಗಿದೆ. ಶುಕ್ರವಾರ ಕೈಸಾಲ ನೀಡಿದ್ದವರಿಗೆ ಹಣ ವಾಪಸ್ ಕೊಡಬೇಕಿತ್ತು.
ಗುರುವಾರ ರಾತ್ರಿ ಚಾಮರಾಜನಗರದಿಂದ ಬೆಂಡರವಾಡಿವರೆಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ತೆರಳಿದ್ದ ಅವರು, ಕೆರೆಯ ದಡದ ಮೇಲೆ ಬಟ್ಟೆಗಳನ್ನು ತೆಗೆದಿಟ್ಟು ನೀರಿಗೆ ಹಾರಿದ್ದಾರೆ.
ಬೆಳಿಗ್ಗೆ ಬಟ್ಟೆಗಳನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಳುಗು ತಜ್ಞರು ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.
'ಸಿದ್ಧಲಿಂಗಸ್ವಾಮಿ ಅವರು ಹಲವು ಕಡೆ ಸಾಲ ಮಾಡಿದ್ದರು. ಸಾಲ ಪಾವತಿಸಲು ಸಾಧ್ಯವಾಗದೆ ಮನನೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.